ಉಳ್ಳಾಲ: ಮುನ್ನೂರು ಗ್ರಾಮದ ಸೋಮನಾಥ ಉಳಿಯದಲ್ಲಿ ಸುಮಾರು ರೂ 2 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಶಿಲಾಮಯ ಸೋಮೇಶ್ವರಿ ದೇವಸ್ಥಾನ ಮತ್ತು ಜೀರ್ಣೋದ್ಧಾರಗೊಂಡ ನಾಗದೇವರು, ಅರಸು, ಧೂಮಾವತಿ ಬಂಟ ಪರಿವಾರ ದೈವಗಳ ದೈವಸ್ಥಾನದಲ್ಲಿ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಇದೇ 19 ರಿಂದ 27ರವರೆಗೆ ನಡೆಯಲಿದೆ.
ವಾರ್ಷಿಕ ನೇಮೋತ್ಸವ 29 ರಿಂದ ಮತ್ತು ಪರಿವಾರ ದೈವಗಳ ಕೋಲ ಮೇ 4ರಂದು ನಡೆಯಲಿದೆ.ದೇವಸ್ಥಾನದಲ್ಲಿ ಶ್ರೀ ಸೋಮೇಶ್ವರಿ ದೇವಿ ಮಾತ್ರವಲ್ಲದೆ ಗಣಪತಿ, ಕಾಳಬೈರವ, ದೇವಸ್ಥಾನದ ಹೊರಭಾಗದಲ್ಲಿ ಡಾಕಿಣಿ, ಆದಿಪುರುಷನ ವಿಗ್ರಹದ ಪ್ರತಿಷ್ಠಾಪನೆ ಹಾಗೂ ನಾಗದೇವರ ಮತ್ತು ಕೊರಗ ತನಿಯ ಸಹಿತ ಪರಿವಾರ ದೈವಗಳ ಪ್ರತಿಷ್ಠೆ ನೆರವೇರಲಿದೆ ಎಂದು ಆಡಳಿತ ಮಂಡಳಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದೆ.
ಗಾಳದ ಕೊಂಕಣಿ ಸಮುದಾಯವೇ ಬೆಳ್ಳಿ, ಚಿನ್ನವನ್ನು ಒದಗಿಸಿಕೊಟ್ಟಿದೆ. ಕ್ಷೇತ್ರಕ್ಕೆ ಪದಾರ್ಪಣೆ ಮಾಡುವಲ್ಲಿಯೇ ದೈವಗಳ ಭಂಡಾರ ಗೃಹವನ್ನು ನೂತನವಾಗಿ ನಿರ್ಮಿಸಲಾಗಿದೆ. ದೇವಸ್ಥಾನ, ದೈವಸ್ಥಾನ ನಿರ್ಮಾಣದ ಬಹುತೇಕ ಕಾಮಗಾರಿಯನ್ನು ಸಮುದಾಯದ ಯುವಕರೇ ಶ್ರಮದಾನದ ಮೂಲಕ ನಿರ್ವಹಿಸಿದ್ದು ವಿಶೇಷ.
ಒಂಭತ್ತು ದಿನಗಳ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳಲ್ಲಿ ನಾಲ್ಕು ದಿನ ಸಾಂಸ್ಕೃತಿಕ, ಧಾರ್ಮಿಕ, ಸಭಾ ಕಾರ್ಯಕ್ರಮ ನಡೆಯಲಿದೆ. ರಾಮಚಂದ್ರ ತಚ್ಚಂಗಾಡ್ ಮಾರ್ಗದರ್ಶನ, ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಹಾಗೂ ಗೋವಾ ಕೈವಲ್ಯ ಮಠಾಧೀಶ ಸರಸ್ವತಿ ಸ್ವಾಮೀಜಿ ಆಶೀರ್ವಾದದೊಂದಿಗೆ ಕುಂಟಾರು ರವೀಶ್ ತಂತ್ರಿ ನೇತೃತ್ವದಲ್ಲಿ ನೆರವೇರಲಿದೆ.
19ರಂದು ಮಧ್ಯಾಹ್ನ 3 ಗಂಟೆಗೆ ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ದೇವಸ್ಥಾನದ ವಠಾರದಿಂದ ಸೋಮನಾಥ ಉಳಿಯ ಕ್ಷೇತ್ರಕ್ಕೆ ಹಸಿರುವಾಣಿಯನ್ನು ವರ್ಣರಂಜಿತ ಮೆರವಣಿಗೆ ಮೂಲಕ ಕರೆತರಲಾಗುವುದು ಎಂದು ತಿಳಿಸಿದರು.