ಬೆಂಗಳೂರು: ನಗರದ ಉತ್ತರ ತಾಲ್ಲೂಕಿನಲ್ಲಿರುವ ರೈತರಿಗೆ ಉಳುಮೆ ಚೀಟಿ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ಪ್ರಾಂತ ರೈತ ಸಂಘದ (ಕೆಪಿಆರ್ಎಸ್) ಸದಸ್ಯರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಧರಣಿ ನಡೆಸಿದರು.
ಸಂಘದ ಅಧ್ಯಕ್ಷ ಎನ್. ವೆಂಕಟಾಚಲಯ್ಯ ಮಾತನಾಡಿ `ನಗರದ ಉತ್ತರ ತಾಲ್ಲೂಕಿನಲ್ಲಿ ಬಡ ರೈತರು ಮತ್ತು ಕೂಲಿಕಾರರು ಹಲವಾರು ವರ್ಷಗಳಿಂದ ಸರ್ಕಾರಿ ಭೂಮಿಯಲ್ಲಿ ಬಗರ್ಹುಖುಂ ಸಾಗುವಳಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಸರ್ಕಾರ ಹಲವು ಕಾರಣಗಳನ್ನು ಹೇಳಿ, ಅವರಿಗೆ ಉಳುಮೆ ಚೀಟಿ ನೀಡಲು ನಿರಾಕರಿಸುತ್ತಿದೆ~ ಎಂದು ಆರೋಪಿಸಿದರು.
ಉಳುಮೆ ಚೀಟಿ ನೀಡುವಂತೆ ಸರ್ಕಾರಕ್ಕೆ ಈಗಾಗಲೇ ಹಲವು ಬಾರಿ ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ದೊರೆತಿಲ್ಲ. ಕೆಲವರಿಗೆ ಉಳುಮೆ ಚೀಟಿ ನೀಡಿದ್ದರೂ ಅದು ನಕಲಿ ಎಂದು ಹೇಳಿ ರೈತರ ಮೇಲೆ ಮೊಕದ್ದಮೆ ದಾಖಲು ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಿಂದ 18 ಕಿ.ಮೀ ದೂರದಲ್ಲೇ ಈ ರೈತರು ನೆಲೆಸಿದ್ದಾರೆ ಎಂದು ನೆಪ ಹೇಳಿ, ಉಳುಮೆ ಚೀಟಿ ನೀಡಲು ನಿರಾಕರಿಸಲಾಗುತ್ತಿದೆ ಎಂದು ದೂರಿದರು.
ಈ ಭಾಗದ ಹಲವು ರೈತರಿಗೆ ನಿವೇಶನಗಳಿಲ್ಲ. ಆದ್ದರಿಂದ ಅವರಿಗೆ ನಿವೇಶನಗಳನ್ನು ನಿರ್ಮಿಸಿ ಕೊಡಬೇಕು ಎಂಬ ಹಲವು ಬೇಡಿಕೆಗಳಿಗೆ ಪ್ರತಿಭಟನಾಕಾರರು ಒತ್ತಾಯಿಸಿದರು. ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಲಾಗಿದ್ದು ಶೀಘ್ರವೇ ಈ ಕುರಿತು ಸಭೆ ನಡೆಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು ವೆಂಕಟಾಚಲಯ್ಯ ತಿಳಿಸಿದರು.