ಆರಾಧನಾ ನಾಟ್ಯಶಾಲೆ: ಶುಕ್ರವಾರ ವಿದ್ವಾನ್ ನಾಗಭೂಷಣ ಅವರ ಶಿಷ್ಯೆ ಉಷಾ ಹರೀಶ್ ಅವರ ಭರತನಾಟ್ಯ ರಂಗಪ್ರವೇಶ.
ಉಷಾ ಅವರನ್ನು ನಾಟ್ಯ ಲೋಕಕ್ಕೆ ಸೆಳೆದಿದ್ದು ಗೆಜ್ಜೆ ಸದ್ದು, ವರ್ಣಮಯ ಉಡುಪು, ಮನಮೋಹಕ ಆಭರಣ. ಚೆನ್ನೈನ ಕೃಷ್ಣಾ ಮ್ಯೂಸಿಕಲ್ ಅಕಾಡೆಮಿಯಲ್ಲಿ 5ರ ಎಳವೆಯಲ್ಲೇ ಭರತನಾಟ್ಯ ಕಲಿಕೆ ಆರಂಭಿಸಿ ಹತ್ತು ವರ್ಷ ಅಭ್ಯಾಸ ಮಾಡಿದರು.
ಬೆಂಗಳೂರಿಗೆ ಮರಳಿದ ನಂತರ ಆರಾಧನಾ ನಾಟ್ಯಶಾಲೆಯ ವಿದ್ವಾನ್ ನಾಗಭೂಷಣ ಅವರ ಬಳಿ ನೃತ್ಯಾಭ್ಯಾಸ ಮುಂದುವರಿಸಿದರು. ಭರತನಾಟ್ಯದ ಸೂಕ್ಷ್ಮತೆಗಳನ್ನೆಲ್ಲ ಮೈಗೂಡಿಸಿಕೊಂಡ ಉಷಾ, ಜೂನಿಯರ್ ಮತ್ತು ಸೀನಿಯರ್ ಪರೀಕ್ಷೆಗಳಲ್ಲಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದರು.
ಇತ್ತೀಚೆಗೆ ಜಾನಪದ ನೃತ್ಯ ಪ್ರಕಾರದಿಂದ ಆಕರ್ಷಿತರಾಗಿರುವ ಉಷಾ ಶಾಲಾ ಸಮಾರಂಭಗಳಿಗೆ ಜಾನಪದ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. ಹತ್ತು ವರ್ಷಗಳಿಂದ ನೃತ್ಯ ತರಬೇತಿ ನೀಡುತ್ತಿದ್ದು, ಅವರ ಹಲವು ವಿದ್ಯಾರ್ಥಿಗಳು ಭರತನಾಟ್ಯದಲ್ಲಿ ಜೂನಿಯರ್ ಉತ್ತೀರ್ಣರಾಗಿದ್ದಾರೆ.
ಉಷಾ ಅವರ ಗುರು ವಿದ್ವಾನ್ ನಾಗಭೂಷಣ ಎರಡು ದಶಕಗಳಿಂದ ನೃತ್ಯ ಹೇಳಿಕೊಡುತ್ತಿದ್ದಾರೆ. ಉತ್ತಮ ಸಂಗೀತಗಾರರು ಆಗಿರುವ ಅವರು ನಟುವಾಂಗದಲ್ಲೂ ಎತ್ತಿದ ಕೈ. ಸಾಂಪ್ರದಾಯಿಕ ಶೈಲಿಯ ಭರತನಾಟ್ಯವನ್ನು ಸುಂದರವಾಗಿ ಅಭಿನಯಿಸುತ್ತಾರೆ.
ಅತಿಥಿಗಳು: ಎಸ್. ಐ. ಭಾವೀಕಟ್ಟಿ, ಡಾ. ಮಹೇಶ ಜೋಶಿ, ಡಾ. ಸೂರ್ಯಪ್ರಸಾದ್, ಮುಳ್ಳಹಳ್ಳಿ ಸೂರಿ, ಲಲಿತಾ ಶ್ರೀನಿವಾಸನ್, ಪದ್ಮಜಾ ಶ್ರೀನಿವಾಸನ್.
ಸ್ಥಳ: ರವೀಂದ್ರ ಕಲಾಕ್ಷೇತ್ರ, ಜೆ.ಸಿ. ರಸ್ತೆ. ಸಂಜೆ 6.