ಇಫ್ತಾರ್ ಊಟ ಮಾತ್ರವಲ್ಲ, ಇಂದು ಬಡಿಸುವವರಿಲ್ಲದ ಭೋಜನಕೂಟಗಳಲ್ಲಿ (ಬಫೆ) ಅರ್ಧ ಊಟಮಾಡಿರುವ ಹಲವರು ಎಂಜಲು ಕೈನಲ್ಲಿಯೇ ಎಲ್ಲ ಪದಾರ್ಥಗಳನ್ನೂ ಬಡಿಸಿಕೊಳ್ಳುತ್ತಿರುತ್ತಾರೆ. ಅಂಥ ಕಡೆ ಮೊದಲಬಾರಿ ಬಡಿಸಿಕೊಂಡ ಮೇಲೆ ಎಷ್ಟೇ ಚೆನ್ನಾಗಿದ್ದರೂ ಎರಡನೆಯ ಬಾರಿ ಬಡಿಸಿಕೊಳ್ಳುವುದು ಇಷ್ಟವಾಗುವುದಿಲ್ಲ.
ಮುಧೋಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರಳಿದ್ದ ನನಗೆ ಅನುಕೂಲ ವಸತಿ ಸಿಕ್ಕಿರಲಿಲ್ಲ. ಶಾಲೆಯೊಂದರಲ್ಲಿ ಉಳಿದಿದ್ದ ನನ್ನನ್ನು ಸಮ್ಮೇಳನಕ್ಕೆ ಬಂದಿದ್ದ, ಹಿಂದೆ ನನ್ನ ವಿದ್ಯಾರ್ಥಿನಿಯಾಗಿದ್ದ ಸಬೀಹಾ ನೋಡಿ ಅಲ್ಲೇ ಇರುವ ತಮ್ಮ ಚಿಕ್ಕಪ್ಪನ ಮನೆಯಲ್ಲಿ ಸ್ನಾನವಾದರೂ ಮಾಡುವಂತೆ ಆಹ್ವಾನಿಸಿದರು. ಅವರ ಚಿಕ್ಕಪ್ಪ ಮತ್ತು ಮನೆಯವರು ನನ್ನನ್ನು ಆತ್ಮೀಯವಾಗಿ ಕಂಡು ನನಗೆ ಊಟ ಮಾಡಿಸಿ ಕಳುಹಿಸಿಕೊಟ್ಟರು. ನಮ್ಮ ಮನೆಯಲ್ಲಿಯೇ ಊಟ ಮಾಡಿದಂಥ ಆ ಆತ್ಮೀಯತೆಯ ಅನುಭವವನ್ನು ಮರೆಯಲಾರೆ.
ಆತ್ಮೀಯತೆ, ಪ್ರೀತಿ, ಭಕ್ತಿ, ಬೇರೆ; ಸಾರ್ವಜನಿಕ ನೈರ್ಮಲ್ಯ, ಆರೋಗ್ಯ, ಸಹ್ಯತೆ ಬೇರೆ. ಇಫ್ತಾರ್ ಹಾಗೆ ಊಟ ಮಾಡುವುದು ಇರಲಿ; ಎಲ್ಲರೂ ಒಟ್ಟಿಗೆ ಕುಳಿತು ಉಣ್ಣಲಾಗದ ಸ್ಥಿತಿ ಈಗ ಇದೆ. ಊಟದಲ್ಲಿ ಹೊರಗಿನವರು, ಒಳಗಿನವರು; ಒಳಗಿನವರಲ್ಲಿಯೇ ಅಡ್ಡಪಂಕ್ತಿಯವರು ಎಂಬ ಭೇದಗಳಿರುವುದರ ಬಗ್ಗೆ ಪೇಜಾವರದ ವಿಶ್ವೇಶ ತೀರ್ಥರಂಥವರು ಯೋಚಿಸಬೇಕು.