ಮಂಗಳೂರು: ಇಲ್ಲಿಗೆ ಸಮೀಪದ ಬಾಳದ ಎಂಆರ್ಪಿಎಲ್ ಮೂರನೇ ಹಂತದ ಕಾಮಗಾರಿ ಘಟಕದಲ್ಲಿ ಶನಿವಾರ ರಾತ್ರಿ ಕ್ರೇನ್ ಮಗುಚಿ ಬಿದ್ದು ಸೂಪರ್ವೈಸರ್ ದಾವಣಗೆರೆಯ ಸಯ್ಯದ್ ಅಲಿ (23) ಎಂಬವರು ಮೃತರಾಗಿದ್ದಾರೆ.
ಕೇನ್ ಆಪರೇಟರ್ ಉಪೇಂದ್ರ ಯಾದವ್ (22) ಎಂಬವರು ಗಾಯಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಯ್ಯದ್ ಅಲಿ ಪ್ರಸ್ತುತ ಮೂಲ್ಕಿಯಲ್ಲಿ ವಾಸವಿದ್ದರು.
ಮೂರನೇ ಹಂತದ ಘಟಕದಲ್ಲಿ ನಿತ್ಯಾನಂದ ಇನ್ಫ್ರಾಸ್ಟ್ರಕ್ಚರ್ ಕಂಪೆನಿ ನಡೆಸುತ್ತಿರುವ ಕಟ್ಟಡ ಕಾಮಗಾರಿಯಲ್ಲಿ ಸಯ್ಯದ್ ಆಲಿ ಸೂಪರ್ವೈಸರ್ ಹಾಗೂ ಕೃಷ್ಣಕಾಂತ್ ಸೈಟ್ ಸೂಪರ್ವೈಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಶನಿವಾರ ರಾತ್ರಿ 8.15ಕ್ಕೆ ಲಾರಿಯಿಂದ ಕಬ್ಬಿಣದ ಬಂಡಲ್ಗಳನ್ನು ಕ್ರೇನ್ ಮೂಲಕ ಕೆಳಗೆ ಇಳಿಸಲಾಗುತ್ತಿತ್ತು. ಈ ಸಂದರ್ಭ ಕ್ರೇನ್ ಆಪರೇಟರ್ ಉಪೇಂದ್ರ ಯಾದವ್ ಯಾವುದೇ ಮುಂಜಾಗ್ರತೆ ವಹಿಸದೆ ಕ್ರೇನ್ ಚಲಾಯಿಸದ ಪರಿಣಾಮ ಬಲ ಮಗ್ಗುಲಿಗೆ ಪಲ್ಟಿ ಹೊಡೆಯಿತು.
ಪರಿಣಾಮ ಸಯ್ಯದ್ ಅಲಿ ಹಾಗೂ ಉಪೇಂದ್ರ ಯಾದವ್ಗೆ ಗಂಭೀರ ಗಾಯಗಳಾದವು. ಕೂಡಲೇ ಅವರಿಬ್ಬರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆಗೆ ಸ್ಪಂದಿಸದೆ ಸಯ್ಯದ್ ಭಾನುವಾರ ಮುಂಜಾನೆ 2 ಗಂಟೆಗೆ ಮೃತಪಟ್ಟರು. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.