ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂಇಎಸ್ ವಿರುದ್ಧ ಕ್ರಮಕ್ಕೆ ಆಗ್ರಹ

Last Updated 1 ಅಕ್ಟೋಬರ್ 2011, 10:35 IST
ಅಕ್ಷರ ಗಾತ್ರ

ವಿಜಾಪುರ: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ಅವರಿಗೆ ಅವಮಾನ ಮಾಡಿದ ಬೆಳಗಾವಿ ಮಹಾನಗರ ಪಾಲಿಕೆಯ ಎಂ.ಇ.ಎಸ್ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯವರು ಹಾಗೂ ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕದಂಬ ಸೈನ್ಯ ಸಂಘಟನೆಯವರು ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಚಂದ್ರಶೇಖರ ಕಂಬಾರ ಅವರಿಗೆ ಪೌರ ಸನ್ಮಾನ ಏರ್ಪಡಿಸಲು ಬೆಳಗಾವಿ ಪಾಲಿಕೆಯ ಕೆಲ ಎಂ.ಇ.ಎಸ್. ಸದಸ್ಯರು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಕನ್ನಡ ವಿರೋಧಿಯಾಗಿರುವ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದವರು  ಮನವಿ ಸಲ್ಲಿಸಿದರು.
ಸಂಜೀವ ಕರ್ಪೂರಮಠ, ಮಹಾದೇವ ರಾವಜಿ, ಅನುರಾಧಾ ಕಲಾಲ್, ಮಂಜುಳಾ ಅಂಗಡಿ, ಫಯಾಜ್ ಕಲಾದಗಿ ಇತರರು ಹಾಜರಿದ್ದರು.

ಕನ್ನಡಿಗರಿಗೆ ಬದುಕು ನೀಡುವ ಡಾ.ಸರೋಜಿನಿ ಮಹಿಷಿ ವರದಿ ನೀಡಿ 25 ವರ್ಷ ಗತಿಸಿದೆ. ಈ ವರದಿಯನ್ನು ಜಾರಿಗೆ ತಂದು ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಉದ್ಯೋಗ ದೊರಕಿಸಿಕೊಡಬೇಕು ಎಂದು ಕದಂಬ ಸೈನ್ಯ ಜಿಲ್ಲಾ ಸಮಿತಿಯವರು ಒತ್ತಾಯಿಸಿದರು.

ಕನ್ನಡ ಅನ್ನದ ಪ್ರಶ್ನೆಯಾಗಬೇಕು. ರಾಜಕೀಯ ಶಕ್ತಿಯಾಗಬೇಕು. ಕನ್ನಡಿಗರು ಬದುಕಿದರೆ ಕನ್ನಡ ಬದುಕುತ್ತದೆ. ಹೀಗಾಗಿ ಬದುಕು ಮತ್ತು ಭಾಷೆಯನ್ನು ಒಟ್ಟಿಗೆ ಗ್ರಹಿಸಿದ ಕನ್ನಡ ಪ್ರಜ್ಞೆ ಮುಖ್ಯವಾಗಬೇಕು. ಕನ್ನಡಿಗರಿಗೆ ಅನ್ನ, ವಸತಿ, ಉದ್ಯೋಗ ಭದ್ರತೆ ನೀಡಲು ಡಾ. ಸರೋಜಿನಿ ಮಹಿಷಿ ವರದಿ ಜಾರಿ ಗೆ ತರಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಚೋರಗಸ್ತಿ ಅವರಿಗೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ ಕುಂಬಾರ, ಪದಾಧಿಕಾರಿಗಳಾದ ಸಾಗರ ಕಾಂಬಳೆ, ರಾಜೇಶ ಹಜೇರಿ, ಸಂತೋಷ ವಾಲಿಕಾರ, ಅಶೋಕ ಕುಂಬಾರ, ಸಿದ್ದಣ್ಣ ನಾಗರಳ್ಳಿ, ಮಲ್ಲನಗೌಡ್ರು ಇತರರು ಮನವಿ ಸಲ್ಲಿಸಿದರು.

ಅಯೋಧ್ಯೆ ತೀರ್ಪಿನ ವರ್ಷಾಚರಣೆ:
ರಾಮ ಜನ್ಮಭೂಮಿ ವಿವಾದ ಈಗ ಸುಪ್ರೀಂ ಕೋರ್ಟ್ ನಲ್ಲಿದ್ದು, ತೀರ್ಪು ಹಿಂದೂಗಳ ಪರವಾಗಿಯೇ ಬರಲಿದೆ ಎಂದು ವಿಶ್ವ ಹಿಂದೂ ಪರಿಷತ್‌ನ ಜಿಲ್ಲಾ ಕಾರ್ಯದರ್ಶಿ ಸಂಗನಗೌಡ ಪಾಟೀಲ ಹೇಳಿದರು. ಅಲಹಾಬಾದ್ ಹೈಕೋರ್ಟ್ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪಿನ ವರ್ಷಾಚರಣೆಯಲ್ಲಿ ಮಾತನಾಡಿದರು.

ರಾಮ ಮಂದಿರ ನಿರ್ಮಾಣಕ್ಕಾಗಿ ನಗರದ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಎಚ್‌ಪಿ, ಬಜರಂಗ ದಳದಿಂದ ಶುಕ್ರವಾರ ಪೂಜೆ ಸಲ್ಲಿಸಲಾಯಿತು.

ಬಜರಂಗ ದಳದ ಜಿಲ್ಲಾ ಸಂಚಾಲಕ ಪ್ರವೀಣ ಹೌದೆ, ಪ್ರಶಾಂತ ಹಿರೇಮಠ, ರಾಜಶೇಖರ ನಿರ್ವಾನಶೆಟ್ಟಿ, ಜಟ್ಟೆಪ್ಪ ಹುಂಡೇಕಾರ, ಅಶೋಕ ಮಠ, ಗೋವಿಂದ ರಜಪೂತ, ಜಯಸಿಂಗ್ ಸಾಳುಂಕೆ ಇತರರು ಉಪಸ್ಥಿತರಿದ್ದರು.

108 ಸಿಬ್ಬಂದಿ ಮುಷ್ಕರಕ್ಕೆ ಬೆಂಬಲ:
ಬೇಡಿಕೆ ಈಡೇರಿಕೆಗಾಗಿ ಆರೋಗ್ಯ ಕವಚ ನೌಕರರು  ನಡೆಸುತ್ತಿರುವ ಮುಷ್ಕರಕ್ಕೆ ಕರ್ನಾಟಕ ರಾಜ್ಯ ಸಂಯುಕ್ತ ವಸತಿ ನಿಲಯ ಕಾರ್ಮಿಕರ ಸಂಘದ  ಅಶೋಕ ದೇಸಾಯಿ, ಕಾಸೀಂ ಆಲ್ದಳ್ಳಿ, ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಮಲ್ಲಿಕಾರ್ಜುನ ಎಚ್.ಟಿ. ಬೆಂಬಲ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT