ಕಡೂರು: ರಾಜ್ಯ ಸರ್ಕಾರದ ವಿರುದ್ಧ ಖಂಡನಾರ್ಹ ಹೇಳಿಕೆ ನೀಡಿದ ಎಂಇಎಸ್ ಶಾಸಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನ ಮತ್ತು ಹೋಬಳಿಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು.
ತಾಲ್ಲೂಕು ಕಚೇರಿಯಲ್ಲಿ ಶುಕ್ರವಾರ ಮನವಿ ಅರ್ಪಿಸಿದ ಕಸಾಪ ಪದಾಧಿಕಾರಿಗಳು, ಹಲವು ಮಹನೀಯರ ಹೋರಾಟ ಮತ್ತು ತ್ಯಾಗ, ಬಲಿದಾನಗಳಿಂದ ಕರ್ನಾಟಕ ರಾಜ್ಯದ ಉದಯವಾಗಿದೆ. ಶಾಸನಸಭೆ ನಡೆಯುವ ಮತ್ತು ಕನ್ನಡ ರಾಜ್ಯೋತ್ಸವದಂತಹ ವಿಶೇಷ ಸಮಯಗಳಲ್ಲಿ ಕನ್ನಡಿಗರ ಸಹನೆಯನ್ನು ದೌರ್ಬಲ್ಯ ಎಂದು ಪರಿಗಣಿಸಿರುವ ಮರಾಠಿ ಭಾಷಿಕರು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸುವಂತೆ ಒತ್ತಾಯಿಸುತ್ತಾ ಬಂದಿದ್ದು ಬೆಳಗಾವಿ ಹೋರಾಟದ ಮೂಲಕ ರಾಜಕೀಯ ಜೀವನ ನಡೆಸುತ್ತಿರುವ ಎಂಇಎಸ್ ಇದಕ್ಕೆ ಕುಮ್ಮಕ್ಕು ನೀಡುತ್ತಿದೆ.
ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಮಯದಲ್ಲಿ ರಾಜ್ಯಸರ್ಕಾರವನ್ನು ಹೀನಾಯವಾಗಿ ಕಂಡು ಶವಕ್ಕೆ ಹೋಲಿಸಿದ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಮತ್ತು ಅರವಿಂದ ಪಾಟೀಲರ ವಿರುದ್ಧ ರಾಜ್ಯಸರ್ಕಾರ ಸಾಧ್ಯವಿರುವ ಕಠಿಣಕ್ರಮಗಳನ್ನು ಜರುಗಿಸಬೇಕು. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಏಕೀಕೃತ ಕರ್ನಾಟಕ ಇನ್ನೂ ಕನಸಾಗಿಯೇ ಉಳಿದಿರುವ ಸಂದರ್ಭದಲ್ಲಿ ಪದೇಪದೇ ಕ್ಯಾತೆ ತೆಗೆಯುವ ಮೂಲಕ ರಾಜ್ಯದ್ರೋಹಿ ನಡವಳಿಕೆಯ ಶಾಸಕರಿಗೆ ಬುದ್ಧಿ ಕಲಿಸಬೇಕಿದೆ.
ಕನ್ನಡಿಗರು ಎಷ್ಟು ಸಹನಶೀಲರು ಎಂಬುದಕ್ಕೆ ಸುಮಾರು 350 ವರ್ಷಗಳ ಹಿಂದೆ ನಿಧನರಾದ ಮರಾಠಾ ಛತ್ರಪತಿ ಶಿವಾಜಿಯ ತಂದೆ ಷಹಜಿಯ ಸಮಾಧಿಯನ್ನು ರಕ್ಷಿಸಿ ಇಟ್ಟಿರುವುದೇ ಸಾಕ್ಷಿಯಾಗಿದೆ. ಇದೇ ಸಮಯದಲ್ಲಿ ಕರ್ನಾಟಕ ವಿಭಜನೆಯ ಕೂಗು ಎತ್ತಿರುವ ಕರ್ನಾಟಕ ಸರ್ಕಾರದಲ್ಲಿ ಮಂತ್ರಿಯಾಗಿ ಅಧಿಕಾರ ಅನುಭವಿಸಿ ಕನ್ನಡ ಜನರಿಂದ ಆಯ್ಕೆಯಾಗಿ ಬಂದ ಶಾಸಕ ಉಮೇಶ್ ಕತ್ತಿಯ ಹೇಳಿಕೆಯನ್ನೂ ಕಸಾಪ ಉಗ್ರವಾಗಿ ಖಂಡಿಸುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಪ್ರತಿಭಟನೆಯಲ್ಲಿ ತಾಲ್ಲೂಕು ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್, ಕೆ.ಜಿ.ಶ್ರೀನಿವಾಸಮೂರ್ತಿ, ಕೆ.ವಿ.ವಾಸು, ಹೋಬಳಿ ಘಟಕದ ಕುಮಾರಸ್ವಾಮಿ, ಸುಮಿತ್ರಮ್ಮ ನಾಗರಾಜ್, ಶಿವಲಿಂಗಪ್ಪ, ಎಂ.ಲೋಕೇಶ್, ಲಕ್ಕಪ್ಪ, ರೇಣುಕಾರಾಧ್ಯ, ಎ.ಆರ್.ಶ್ರೀನಿವಾಸಯ್ಯ, ಕೃಷ್ಣಮೂರ್ತಿ, ಅಜ್ಜಯ್ಯ ಒಡೆಯರ್ ಇನ್ನಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.