ದೇವದುರ್ಗ: ಬೆಳಗಾವಿಯಲ್ಲಿ ಈಚೆಗೆ ನಡೆದ 4ನೇ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಶಾಸಕರಾದ ಸಂಭಾಜೀ ಪಾಟೀಲ ಹಾಗೂ ಅರವಿಂದ ರಾಜ್ಯ ಸರ್ಕಾರದ ಬಗ್ಗೆ ಹಗುರವಾಗಿ ಮಾತನಾಡಿರುವ ವರ್ತನೆಯನ್ನು ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಪರ ಸಂಘಟನೆಗಳು ಖಂಡಿಸಿವೆ.
ಗುರವಾರ ಪಟ್ಟಣದ ಸಾರ್ವಜನಿಕ ಕ್ಲಬ್ನಿಂದ ಮಿನಿ ವಿಧಾನಸೌಧದವರೆಗೂ ಶಾಸಕ ಸಂಭಾಜೀ ಪಾಟೀಲ, ಮಾಜಿ ಸಚಿವ ಉಮೇಶ ಕತ್ತಿ ಅವರ ವಿರುದ್ಧ ಕಸಾಪ ಮುಖಂಡರು ಮತ್ತು ಕನ್ನಡ ಪರ ಸಂಘಟನೆಗಳ ಮುಖಂಡರು ಘೋಷಣೆಗಳನ್ನು ಕೂಗಿದರು. ಕೆಲವು ಕಾಲ ಪ್ರತಿಭಟಿಸುವ ಮೂಲಕ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ನರಸಿಂಗರಾವ್ ಸರಕೀಲ್ ಹಾಗೂ ಇತರ ಮುಖಂಡರು ಶಿರಸ್ತೆದಾರ ಚನ್ನಾ ನಾಯ್ಕ ಅವರಿಗೆ ಸಲ್ಲಿಸಿದರು.
ಶಾಸಕ ಸ್ಥಾನದಲ್ಲಿ ಇರುವ ಸಂಭಾಜೀ ಪಾಟೀಲ ಅವರು ಕರ್ನಾಟಕ ಸರ್ಕಾರದ ಶವಯಾತ್ರೆ ಮಾಡುವುದಾಗಿ ಹೇಳಿರುವುದು ಖಂಡನೀಯ. ಸರ್ಕಾರ ವಿರುದ್ಧ ಮಾತನಾಡಿರುವ ಅವರ ಮೇಲೆ ಕ್ರಮ ಜರುಗಿಸಬೇಕೆಂದು ಪ್ರಗತಿ ಪರ ಸಂಘಟನೆಯ ಮುಖಂಡ ಎಚ್.ಶಿವರಾಜ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಜಿ. ಬಸವರಾಜ ನಾಯಕ, ಪ್ರಭು ಗದ್ಗಿ, ವೆಂಕಟೇಶ ಮಕ್ತಾಲ್, ಅಮಜದ್ ಅಲಿ, ಪ್ರಕಾಶ ಪಾಟೀಲ ವಕೀಲ, ಭೀಮೋಜಿರಾವ್ ಜಗತಾಪ್, ರಂಗಣ್ಣ ಪಾಟೀಲ ಅಳ್ಳುಂಡಿ, ಎಚ್.ದಂಡಪ್ಪ, ಪ್ರಾಣೇಶ ಶೆಟ್ಟಿ, ಶಿವರಾಜ ಅಕ್ಕಿಕಲ್, ಶಬ್ಬೀರ್, ರಂಗಣ್ಣ ಕೋಲ್ಕಾರ್, ಲಿಂಗಪ್ಪ ಜಾಲಹಳ್ಳಿ, ತಿಪ್ಪಯ್ಯ ನಾಯಕ, ನರಸಣ್ಣ ನಾಯಕ, ಸಂಗಮೇಶ ಜಾಲಹಳ್ಳಿ, ಕೆ.ಎಸ್. ನಾಡಗೌಡ ಹಾಗೂ ಇತರರು ಇದ್ದರು.