ಹೈದರಾಬಾದ್ (ಪಿಟಿಐ): ಆಂಧ್ರಪ್ರದೇಶದಲ್ಲಿ ಕಿರು ಹಣಕಾಸು ಸಂಸ್ಥೆಗಳ (ಎಂಎಫ್ಐ) ನಿಯಂತ್ರಣ ಮಸೂದೆ ಕಾಯ್ದೆಯಾಗಿ ಜಾರಿಗೆ ಬಂದ ನಂತರ ಯಾವುದೇ ಹೊಸ ಸಾಲಗಳನ್ನು ನೀಡಲು ಹಣಕಾಸು ಸಂಸ್ಥೆಗಳು ಮುಂದಾಗುತ್ತಿಲ್ಲ.
ಕಾಯ್ದೆ ಜಾರಿಗೆ ಬಂದ ನಂತರ, ಸಾಲದ ಮರು ಪಾವತಿ ಪ್ರಮಾಣ ತಗ್ಗಿದೆ. ಇದರಿಂದ ವಸೂಲಾಗದ ಸಾಲದ ಪ್ರಮಾಣ (ಎನ್ಪಿಎ) ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಕಿರು ಹಣಕಾಸು ಸಂಸ್ಥೆಗಳು ಹೊಸ ಸಾಲಗಳನ್ನು ನೀಡಲು ಹಿಂದೇಟು ಹಾಕುತ್ತಿವೆ ಎನ್ನಲಾಗಿದೆ.
ಮಸೂದೆ ಜಾರಿಗೆ ಮುನ್ನ ಕಿರು ಹಣಕಾಸು ಸಂಸ್ಥೆಗಳ ಒಟ್ಟು ಸಾಲದ ಮೊತ್ತವು ರಾಜ್ಯದಲ್ಲಿ ರೂ10,386 ಕೋಟಿಗಳಷ್ಟಿತ್ತು. ಮಸೂದೆ ಜಾರಿಯಾದ ನಂತರ ಇದು ರೂ 6,381 ಕೋಟಿಗಳಷ್ಟಾಗಿದೆ ಎಂದು ಸರ್ಕಾರದ ಅಂಕಿ ಅಂಶಗಳು ತಿಳಿಸುತ್ತವೆ.
`ಎಂಎಫ್ಐ~ಗಳಿಂದ ಸಾಲ ಪಡೆದ ಬಡ ಕೂಲಿ ಕಾರ್ಮಿಕರಲ್ಲಿ ಕೆಲವರು ಸಾಲ ವಸೂಲಿಗಾರರ ಕಿರುಕುಳ ತಡೆಯಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ಅಕ್ಟೋಬರ್ 15 ರಂದು ಕಿರು ಹಣಕಾಸು ಸಂಸ್ಥೆಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಲಾಗಿತ್ತು.
`ಈ ಕಾಯ್ದೆಯ ಉದ್ದೇಶ ಈಡೇರಿದೆ. `ಎಂಎಫ್ಐ~ಗಳಿಂದ ಬಡ ಕೂಲಿ ಕಾರ್ಮಿಕರ, ಸ್ವ-ಸಹಾಯ ಸಂಘಟನೆಗಳ ಷೋಷಣೆ ತಪ್ಪಿದೆ ಎನ್ನುತ್ತಾರೆ ಆಂಧ್ರಪ್ರದೇಶದ ಗ್ರಾಮೀಣ ಅಭಿವೃದ್ಧಿ ಪ್ರಧಾನ ಕಾರ್ಯದರ್ಶಿ ರೆಡ್ಡಿ ಸುಬ್ರಮಣಿಯಂ.
ಕಿರು ಹಣಕಾಸು ಸಂಸ್ಥೆಗಳು ನೀಡಿರುವ ಸಾಲ ಮರು ವಸೂಲಿಯಲ್ಲಿ ಸರ್ಕಾರ ಯಾವುದೇ ಪಾತ್ರ ವಹಿಸುವುದಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ರಾಜ್ಯ ಸರ್ಕಾರ ಜಾರಿಗೊಳಿಸಿದ ಕಿರು ಹಣಕಾಸು ಸಂಸ್ಥೆಗಳ ನಿಯಂತ್ರಣ ಕಾಯ್ದೆಯಿಂದ ಕಂಪೆನಿಯ ಪ್ರಗತಿ ಶೇ 5ರಷ್ಟು ಕುಸಿದಿದೆ ಎಂದು ಪ್ರಮುಖ ಕಿರು ಹಣಕಾಸು ಸಂಸ್ಥೆ `ಎಸ್ಕೆಎಸ್~ ಫೈನಾನ್ಸ್ನ ಕಾರ್ಯನಿರ್ವಾಹಕ ಅಧಿಕಾರಿ ವಿಕ್ರಂ ಅಕುಲ ಹೇಳಿದ್ದಾರೆ.