ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಂ.ಎಸ್.ದೋನಿಗೆ ನಾಯಕತ್ವ

Last Updated 12 ಸೆಪ್ಟೆಂಬರ್ 2011, 18:55 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ವಿಶ್ವಕಪ್ ಗೆದ್ದ ಭಾರತದ ನಾಲ್ಕು ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಪ್ರಕಟಿಸಿದ `ವರ್ಷದ ಏಕದಿನ ತಂಡ~ದಲ್ಲಿ ಸ್ಥಾನ ಪಡೆದಿದ್ದಾರೆ. ಮಹೇಂದ್ರ ಸಿಂಗ್ ದೋನಿ ಅವರಿಗೆ ನಾಯಕತ್ವದ ಜವಾಬ್ದಾರಿ ಲಭಿಸಿದೆ.

ದೋನಿ ಅಲ್ಲದೆ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಜಹೀರ್ ಖಾನ್ 12 ಸದಸ್ಯರ ತಂಡದಲ್ಲಿ ಅವಕಾಶ ಗಿಟ್ಟಿಸಿದ್ದಾರೆ. ಯುವರಾಜ್ ಸಿಂಗ್ ಐಸಿಸಿ ವಿಶ್ವಕಪ್‌ನಲ್ಲಿ `ಟೂರ್ನಿಯ ಶ್ರೇಷ್ಠ ಆಟಗಾರ~ ಎನಿಸಿದ್ದರು. ಪ್ರಸಕ್ತ ವರ್ಷ ಏಕದಿನ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಐಸಿಸಿ ಈ ತಂಡಕ್ಕೆ ಆಯ್ಕೆ ಮಾಡಿದೆ.

ಈ ತಂಡದಲ್ಲಿ ಭಾರತದ ಅತಿಹೆಚ್ಚು ಆಟಗಾರರು ಕಾಣಿಸಿಕೊಂಡಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಅವಕಾಶ ಗಿಟ್ಟಿಸಿಲ್ಲ. ಮಹೇಂದ್ರ ಸಿಂಗ್ ದೋನಿಗೆ ನಾಯಕತ್ವದ ಜೊತೆಗೆ ವಿಕೆಟ್ ಕೀಪರ್‌ನ ಜವಾಬ್ದಾರಿಯೂ ದೊರೆತಿದೆ. ಅವರು ಸತತ ನಾಲ್ಕನೇ ವರ್ಷ ವಿಕೆಟ್ ಕೀಪರ್ ಆಗಿ ಸ್ಥಾನ ಪಡೆದಿದ್ದಾರೆ.

ಶ್ರೀಲಂಕಾದ ಕುಮಾರ ಸಂಗಕ್ಕಾರ ಮತ್ತು ತಿಲಕರತ್ನೆ ದಿಲ್ಶಾನ್ ತಂಡದಲ್ಲಿದ್ದಾರೆ.  ಸೆಹ್ವಾಗ್ ಮತ್ತು ದಿಲ್ಶಾನ್‌ಗೆ ಆರಂಭಿಕ ಬ್ಯಾಟ್ಸ್‌ಮನ್‌ಗಳ ಜವಾಬ್ದಾರಿ ದೊರೆತಿದೆ.

ವೆಸ್ಟ್ ಇಂಡೀಸ್‌ನ ಮಾಜಿ ನಾಯಕ ಕ್ಲೈವ್ ಲಾಯ್ಡ ನೇತೃತ್ವದ ಸಮಿತಿ ಆಯ್ಕೆ ಮಾಡಿದ ತಂಡವನ್ನು ಐಸಿಸಿ ಸೋಮವಾರ ಪ್ರಕಟಿಸಿತು. ಮಾಜಿ ಆಟಗಾರರಾದ ಪಾಕಿಸ್ತಾನದ ಜಹೀರ್ ಅಬ್ಬಾಸ್, ಇಂಗ್ಲೆಂಡ್‌ನ ಮೈಕ್ ಗ್ಯಾಟಿಂಗ್, ನ್ಯೂಜಿಲೆಂಡ್‌ನ ಡ್ಯಾನಿ ಮಾರಿಸನ್ ಮತ್ತು ದಕ್ಷಿಣ ಆಫ್ರಿಕಾದ ಪಾಲ್ ಆ್ಯಡಮ್ಸ ಸಮಿತಿಯಲ್ಲಿದ್ದರು.

ಐಸಿಸಿ `ವರ್ಷದ ಟೆಸ್ಟ್ ತಂಡ~ವನ್ನು ಕೆಲ ದಿನಗಳ ಹಿಂದೆ ಪ್ರಕಟಿಸಲಾಗಿತ್ತು. ಐಸಿಸಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಮಂಗಳವಾರ ನಡೆಯಲಿದೆ.

ಐಸಿಸಿ ವರ್ಷದ ಏಕದಿನ ತಂಡ ಹೀಗಿದೆ: ಮಹೇಂದ್ರ ಸಿಂಗ್ ದೋನಿ (ನಾಯಕ), ತಿಲಕರತ್ನೆ ದಿಲ್ಶಾನ್, ವೀರೇಂದ್ರ ಸೆಹ್ವಾಗ್, ಕುಮಾರ ಸಂಗಕ್ಕಾರ, ಎಬಿ ಡಿವಿಲಿಯರ್ಸ್, ಶೇನ್ ವ್ಯಾಟ್ಸನ್, ಯುವರಾಜ್ ಸಿಂಗ್, ಗ್ರೇಮ್ ಸ್ವಾನ್, ಉಮರ್ ಗುಲ್, ಡೇಲ್ ಸ್ಟೇನ್, ಜಹೀರ್ ಖಾನ್, ಲಸಿತ್ ಮಾಲಿಂಗ (12ನೇ ಆಟಗಾರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT