ಭಾಲ್ಕಿ: ಇಲ್ಲಿನ ಮಹಾತ್ಮಾ ಗಾಂಧಿ ಸಹಕಾರ ಸಕ್ಕರೆ ಕಾರ್ಖಾನೆಗೆ 2012-13ನೇ ಸಾಲಿನ ಕಬ್ಬು ಅಭಿವೃದ್ಧಿಯ ಸಾಧನೆಗೆ ಪ್ರಥಮ ಪುರಸ್ಕಾರ ಲಭಿಸಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು ತಿಳಿಸಿದ್ದಾರೆ.
ಸೌತ್ ಇಂಡಿಯನ್ ಶುಗರ್ಕೇನ್ ಆ್ಯಂಡ್ ಶುಗರ್ ಟೆಕ್ನಾಲಜಿ ಅಸೋಸಿಯೇಶನ್ ಚನೈನಿಂದ ಸರ್ವೆ ಮಾಡಲಾದ ಕರ್ನಾಟಕ ರಾಜ್ಯದ ಕಾರ್ಖಾನೆಗಳಲ್ಲಿ ಎಂಜಿಎಸ್ಎಸ್ಕೆ ಯು 2012-13ನೇ ಸಾಲಿನಲ್ಲಿ 5 ಲಕ್ಷ 21 ಸಾವಿರ 472 ಟನ್ ಕಬ್ಬು ನುರಿಸುವ ಮೂಲಕ ಗರಿಷ್ಠ ಸಾಧನೆ ಮಾಡಿದೆ.
ಅದಕ್ಕಾಗಿ ಜುಲೈ 26 ಮತ್ತು 27ರಂದು ಚನ್ನೈನಲ್ಲಿ ನಡೆದ 43ನೇ ವಾರ್ಷಿಕ ಮಹಾಸಭೆಯಲ್ಲಿ ಮಹಾತ್ಮಾ ಗಾಂಧಿ ಕಾರ್ಖಾನೆಗೆ ಪ್ರಥಮ ಬಹುಮಾನ ಮತ್ತು ಪ್ರಶಂಸಾ ಪತ್ರ ನೀಡಿ ಗೌರವಿಸಲಾಗಿದೆ ಎಂದು ತಿಳಿಸಲಾಗಿದೆ. ಈ ಸಾಧನೆಗೆ ಬೀದರ ಜಿಲ್ಲೆಯ ರೈತರ ಸಹಕಾರ ಮತ್ತು ಕಾರ್ಖಾನೆಯ ಸಿಬ್ಬಂದಿ ಮತ್ತು ದಕ್ಷ ಅಡಳಿತ ಫಲಶ್ರುತಿಯೇ ಕಾರಣವಾಗಿದೆ ಎಂದು ಎಂ.ಡಿ ಪ್ರಕಟಣೆಯಲ್ಲಿ ಹೇಳಿದ್ದಾರೆ.