ಬೆಂಗಳೂರು: `ಎಂಜಿನಿಯರಿಂಗ್ ಬೋಧನೆಗೆ ಪ್ರಾಧಾನ್ಯತೆ ಇದ್ದರೂ ಅದು ಬೆಳಕಿಗೆ ಬರುತ್ತಿಲ್ಲ. ಇತರೆ ಶಿಕ್ಷಕರಂತೆ ಎಂಜಿನಿಯರಿಂಗ್ ಬೋಧಕರಿಗೆ ಮಾನ್ಯತೆ ದೊರೆಯುತ್ತಿಲ್ಲ~ ಎಂದು ಖಗೋಳ ವಿಜ್ಞಾನಿ ಡಾ.ಯು.ಆರ್.ರಾವ್ ವಿಷಾದ ವ್ಯಕ್ತಪಡಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಹಾಗೂ ಶೃತ್ ಮತ್ತು ಸ್ಮಿತ್ ಪ್ರತಿಷ್ಠಾನ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ `ಯಂಗ್ ಟೆಕ್ ಇಂಡಿಯಾ- 2011~ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
`ಸುಮಾರು 25 ಸಾವಿರ ಎಂಜಿನಿಯರಿಂಗ್ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ. ಅವರು ಬೇರೆಲ್ಲಾ ಬೋಧಕರಂತೆ ಸಮರ್ಥರಾಗಿದ್ದಾರೆ. ಇಂತಹ ಶಿಕ್ಷಕರಿಗೆ ಸರ್ಕಾರಿ ಬೋಧಕರಿಗೆ ಸಿಗುವ ಮಾನ್ಯತೆ ದೊರೆಯಬೇಕಿದೆ~ ಎಂದರು.
`ಅಣ್ಣಾ ಹಜಾರೆ ಅವರ ಹೋರಾಟದ ನಿರೀಕ್ಷೆಗೂ ಮೀರಿದ ಯಶಸ್ಸಿಗೆ ಯುವಕರೇ ಪ್ರಮುಖ ಕಾರಣ. ಈ ಆಂದೋಲನ ಯುವಕರಲ್ಲಿ ಮಹಾನ್ ಶಕ್ತಿ ಇದೆ ಎನ್ನುವುದನ್ನು ಬಿಂಬಿಸಿದೆ. ಯುವಕರ ಶಕ್ತಿಯನ್ನು ಬಿಂಬಿಸಲು ಆಂದೋಲನ ವು ಒಂದು ಉತ್ತಮ ವೇದಿಕೆಯಾಯಿತು~ ಎಂದು ಹೇಳಿದರು.
ಕುಲಪತಿ ಡಾ. ಎಚ್.ಮಹೇಶಪ್ಪ, ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ವೀರೇಶಾನಂದಜೀ ಸರಸ್ವತಿ ಸ್ವಾಮೀಜಿ, ಸುಪ್ರಿಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ, ನಿವೃತ್ತ ಸೇನಾಧಿಕಾರಿ ಮೇಜರ್ ಜನರಲ್ ಡಿ.ಎನ್.ಖುರಾನಾ, ಉದ್ಯಮಿ ಸಂಜಯ್ ಸಿಂಗ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.