ಹರಿಹರ: ಕಂಪೆನಿ ಬೀಗಮುದ್ರೆಯಾಗಿ 10ವರ್ಷ ಕಳೆದರೂ ಕಾರ್ಮಿಕರಿಗೆ ಗ್ರ್ಯಾಚುಟಿ ನೀಡದ ಎಂಪ್ಲಾಯೀಸ್ ಗ್ರೂಪ್ ಗ್ರ್ಯಾಚುಟಿ ಫಂಡ್ ಟ್ರಸ್ಟ್ ವಿರುದ್ಧ ಮೈಸೂರು ಕಿರ್ಲೋಸ್ಕರ್ ಎಂಪ್ಲಾಯೀಸ್ ಅಸೋಸಿಯೇಷನ್ ಸದಸ್ಯರು ಭಾನುವಾರ ನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಮಿಕ ಮುಖಂಡರು, ಗ್ರ್ಯಾಚುಟಿ ಕಾಯ್ದೆಯಡಿ, ಕಾರ್ಮಿಕರಿಗೆ ಗ್ರ್ಯಾಚುಟಿ ಮೊತ್ತ ಪಾವತಿ ಮಾಡಲು ಕಂಪೆನಿ ಟ್ರಸ್ಟ್ನ್ನು ನಿರ್ಮಿಸಿತ್ತು.ಕಂಪೆನಿ ಪ್ರತಿ ವರ್ಷ ಗ್ರ್ಯಾಚುಟಿ ಹಣವನ್ನು ಟ್ರಸ್ಟ್ಗೆ ಜಮಾ ಮಾಡುತ್ತಿತ್ತು. ಇದನ್ನು ಟ್ರಸ್ಟ್ ನಿರ್ವಹಣೆ ಮಾಡುತ್ತಿತ್ತು. ಟ್ರಸ್ಟ್ನಲ್ಲಿ ಕಂಪೆನಿ ಅಧಿಕಾರಿಗಳನ್ನು ನೇಮಿಸಲಾಗಿತ್ತು. ಆ ಟ್ರಸ್ಟ್ನಲ್ಲಿ ಕಾರ್ಮಿಕ ಪ್ರತಿನಿಧಿಗಳು ಇರಲಿಲ್ಲ ಎಂದು ತಿಳಿಸಿದರು.
ಕಂಪೆನಿ ನಡೆಯುತ್ತಿದ್ದಾಗ ಕೆಲಸಗಾರರು ನಿವೃತ್ತರಾದ ತಿಂಗಳ ಒಳಗಾಗಿ ಅವರ ಗ್ರ್ಯಾಚುಟಿ ಹಾಗೂ ಇತರೆ ಮೊತ್ತಗಳನ್ನು ಪಾವತಿ ಮಾಡುತ್ತಿತ್ತು. ಕಂಪೆನಿ ಬೀಗಮುದ್ರೆಯಾದಾಗ ಟ್ರಸ್ಟ್ ಕಾರ್ಮಿಕರಿಗೆ ಗ್ರ್ಯಾಚುಟಿ ಹಣ ನೀಡಬೇಕಿತ್ತು ಅಥವಾ ತಮ್ಮ ಜವಾಬ್ದಾರಿಯನ್ನು ಸಮಾಪನಾ ಅಧಿಕಾರಿಗಳಿಗೆ ವಹಿಸಬೇಕಾಗಿತ್ತು. ಟ್ರಸ್ಟ್ ಕಾರ್ಮಿಕರ ಗ್ರ್ಯಾಚುಟಿ ಹಣವನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಿ ಮೌನ ವಹಿಸಿದ್ದಾರೆ. ಇದರಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ ಎಂದರು.
ಈ ಕುರಿತು ಸಮಾಪನಾಧಿಕಾರಿಗಳು ಗ್ರ್ಯಾಚುಟಿ ಮೊತ್ತವನ್ನು ಸಂಬಂಧಿಸಿ ಟ್ರಸ್ಟ್ನಿಂದಲೇ ಪಡೆದುಕೊಳ್ಳಬೇಕು ಎಂದು ನೊಟೀಸ್ ನೀಡಿದ್ದಾರೆ. ಟ್ರಸ್ಟ್ನ ಹೆಸರಿನಲ್ಲಿ ಕಳುಹಿಸಿದ ಅಂಚೆಯನ್ನು ಟ್ರಸ್ಟ್ನವರು ಸ್ವೀಕರಿಸದೇ ನಿರಾಕರಿಸುತ್ತಿದೆ. ಕಾರಣ, ಟ್ರಸ್ಟ್ನ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದೇವೆ ಎಂದರು.ಈ ಸಂದರ್ಭದಲ್ಲಿ ಪಿ.ಜಿ. ಗೌಡರ್, ಪಿ.ವೈ. ಪಾಟೀಲ್, ಕರಿಲಿಂಗಪ್ಪ, ವಿ.ಎಂ. ಜೋಷಿ, ಎ. ಹರಿ ಹಾಗೂ ಇತರರು ಇದ್ದರು.