ಬೆಂಗಳೂರು: ಆಡುಗೋಡಿ ಸಮೀಪದ ಸುಬ್ಬಣ್ಣ ಗಾರ್ಡನ್ನಲ್ಲಿರುವ ಸೇಂಟ್ ಹಾಪ್ಕಿನ್ಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಅಮನ್ಕುಮಾರ್ (24) ಎಂಬುವರು ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶ ಮೂಲದ ಅಮನ್ಕುಮಾರ್, ಎಂಬಿಎ ಮೂರನೇ ಸೆಮಿಸ್ಟರ್ ಓದುತ್ತಿದ್ದರು.
ಕಾಲೇಜಿನ ಆವರಣದಲ್ಲಿರುವ ವಿದ್ಯಾರ್ಥಿನಿಲಯದಲ್ಲಿ ವಾಸವಾಗಿದ್ದ ಅವರು ಕೊಠಡಿಯಲ್ಲಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
‘ಪೋಷಕರಿಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ನನ್ನ ಸಾವಿಗೆ ಯಾರೂ ಕಾರಣರಲ್ಲ’ ಎಂದು ಅಮನ್ಕುಮಾರ್ ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಅಶೋಕನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ಚಿನ್ನಾಭರಣ ಕಳವು
ವಿಜಯನಗರ ಬಳಿಯ ಮಾರೇನಹಳ್ಳಿ ಎರಡನೇ ಮುಖ್ಯರಸ್ತೆ ನಿವಾಸಿ ಚಂದ್ರಶೇಖರ್ ಎಂಬುವರ ಮನೆಯಲ್ಲಿ ದುಷ್ಕರ್ಮಿಗಳು ಚಿನ್ನಾಭರಣ ಸೇರಿದಂತೆ ಸುಮಾರು ₨ 4 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ.
ಚಂದ್ರಶೇಖರ್ ಅವರು ಮನೆಯ ಬೀಗದ ಕೀಯನ್ನು ಬಾಗಿಲಿನ ಪಕ್ಕದ ಪೆಟ್ಟಿಗೆಯಲ್ಲಿಟ್ಟು ಕುಟುಂಬ ಸದಸ್ಯರೊಂದಿಗೆ ಭಾನುವಾರ ಸಿನಿಮಾಕ್ಕೆ ಹೋಗಿದ್ದಾಗ ಈ ಘಟನೆ ನಡೆದಿದೆ.
ಕಳ್ಳರು ಆ ಬೀಗದ ಕೀಯಿಂದ ಮನೆಯ ಬಾಗಿಲು ತೆರೆದು ಒಳನುಗ್ಗಿ ಅಲ್ಮೇರಾದಲ್ಲಿದ್ದ 170 ಗ್ರಾಂ ಚಿನ್ನಾಭರಣ ಮತ್ತು 200 ಗ್ರಾಂ ಬೆಳ್ಳಿ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.