ಬೆಂಗಳೂರು: ಕಾಟನ್ಪೇಟೆ ಮುಖ್ಯರಸ್ತೆಯ ಪಂಕಜಾ ಪ್ಯಾರಡೈಸ್ ವಸತಿಗೃಹದಲ್ಲಿ ವೆಂಕಟ್ಗಿರೀಶ್ (39) ಎಂಬುವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೂಲತಃ ಮೈಸೂರಿನ ವೆಂಕಟ್ಗಿರೀಶ್, ನಗರದ ಕೋರಮಂಗಲದಲ್ಲಿರುವ ಆದಿತ್ಯ ಬಿರ್ಲಾ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದರು. ಎಂಸಿಎ ಪದವೀಧರರಾಗಿದ್ದ ಅವರು ಹಲವು ವರ್ಷಗಳಿಂದ ನಗರದಲ್ಲಿ ನೆಲೆಸಿದ್ದರು.
ಸೋಮವಾರ (ಡಿ.9) ಪಂಕಜಾ ಪ್ಯಾರಡೈಸ್ ವಸತಿಗೃಹಕ್ಕೆ ಬಂದಿದ್ದ ವೆಂಕಟ್ಗಿರೀಶ್, ಕೊಠಡಿಯೊಂದನ್ನು ಬಾಡಿಗೆಗೆ ಪಡೆದುಕೊಂಡಿದ್ದರು. ಆ ದಿನ ರಾತ್ರಿ ಕೊಠಡಿಯೊಳಗೆ ಹೋಗಿದ್ದ ಅವರು ನಂತರ ಹೊರಗೆ ಬಂದಿರಲಿಲ್ಲ. ಅವರ ಕೊಠಡಿಯಿಂದ ಕೆಟ್ಟ ವಾಸನೆ ಬರುತ್ತಿದ್ದುದನ್ನು ಗಮನಿಸಿದ ವಸತಿಗೃಹದ ಕೆಲಸಗಾರರು ಠಾಣೆಗೆ ಶುಕ್ರವಾರ ಮಾಹಿತಿ ನೀಡಿದರು. ಆ ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂತು ಎಂದು ಪೊಲೀಸರು ತಿಳಿಸಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಾಟನ್ಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ಸರಗಳ್ಳರ ಬಂಧನ
ಸರಗಳ್ಳರನ್ನು ಬಂಧಿಸಿರುವ ಹೆಣ್ಣೂರು ಪೊಲೀಸರು ಚಿನ್ನಾಭರಣ ಸೇರಿದಂತೆ ರೂ 10.61 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ದೊಡ್ಡನೆಕ್ಕುಂದಿಯ ವಿಶ್ವ (20), ಸಂದೀಪ್ (22), ಚಿಂತಾಮಣಿ ತಾಲ್ಲೂಕಿನ ಮಂಜುನಾಥ (27), ಆತನ ತಮ್ಮ ನಾಗೇಶ್ (21) ಮತ್ತು ವೆಂಕಟೇಶ್ (22) ಬಂಧಿತರು.
ಆರೋಪಿಗಳಿಂದ 350 ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ನಾಲ್ಕು ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು ಹೆಣ್ಣೂರು, ಕೆ.ಆರ್.ಪುರ, ಎಚ್ಎಸ್ಆರ್ ಲೇಔಟ್, ಮಹದೇವಪುರ, ರಾಮಮೂರ್ತಿನಗರ, ಇಂದಿರಾ-ನಗರ, ಜೀವನ್ಬಿಮಾನಗರ, ಪರಪ್ಪನ ಅಗ್ರಹಾರ ಠಾಣೆ ವ್ಯಾಪ್ತಿಯಲ್ಲಿ ಸರಗಳನ್ನು ದೋಚಿದ್ದರು.
ಆ ಸರಗಳನ್ನು ಚಿಂತಾಮಣಿ ಹಾಗೂ ಆಂಧ್ರಪ್ರದೇಶದಲ್ಲಿ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ನಾಗೇಶ್ನನ್ನು ಒಂದೂವರೆ ವರ್ಷದ ಹಿಂದೆ ಕೋರಮಂಗಲ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆತ ಅಪರಾಧ ಕೃತ್ಯಗಳನ್ನು ಮುಂದುವರಿಸಿದ್ದ. ಆರೋಪಿಗಳ ಬಂಧನದಿಂದ 16 ಸರಗಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಹೆಣ್ಣೂರು ಇನ್ಸ್ಪೆಕ್ಟರ್ ಎಚ್.ಲಕ್ಷ್ಮೀನಾರಾಯಣಪ್ರಸಾದ್ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ವಿದ್ಯಾರ್ಥಿ ಸಾವು
ಮಲ್ಲೇಶ್ವರ ಎಂಟನೇ ಮುಖ್ಯರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಕೌಶಿಕ್ (19) ಎಂಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಆತ ಸ್ನೇಹಿತನನ್ನು ಭೇಟಿಯಾಗಲು ಬೈಕ್ನಲ್ಲಿ ಮಲ್ಲೇಶ್ವರಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.
ಈ ವೇಳೆ ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಆತನ ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.