ಬೆಂಗಳೂರು: ಅಖಿಲ ಭಾರತ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ (ಎಐಇಇಇ) ಫಲಿತಾಂಶ ಭಾನುವಾರ ಪ್ರಕಟಗೊಂಡಿದೆ.
ರಾಜಾಜಿನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿ ಸಾಗರ್ ಹೊನ್ನುಂಗಾರ್ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಇವರದು ರಾಷ್ಟ್ರಮಟ್ಟದಲ್ಲಿ 21ನೇ ರ್ಯಾಂಕ್. ಇಂದಿರಾನಗರದ `ನ್ಯಾಷನಲ್ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಅದಿತಿ ರಘುನಾಥನ್ ರಾಜ್ಯಕ್ಕೆ ದ್ವಿತೀಯ ಹಾಗೂ ರಾಷ್ಟ್ರಮಟ್ಟದಲ್ಲಿ 61ನೇ ಸ್ಥಾನ ಗಳಿಸಿದ್ದಾರೆ.
ನಗರದ `ನ್ಯಾಷನಲ್ ಹಿಲ್ ವ್ಯೆ ಪಬ್ಲಿಕ್ ಸ್ಕೂಲ್~ ವಿದ್ಯಾರ್ಥಿನಿ ಪೃಥ್ವಿ ಹೆಗಡೆ ರಾಜ್ಯಕ್ಕೆ 3ನೇ ರ್ಯಾಂಕ್ ಹಾಗೂ ರಾಷ್ಟ್ರಕ್ಕೆ 130ನೇ ರ್ಯಾಂಕ್ ಗಳಿಸಿದ್ದಾರೆ.
ಈ ಬಗ್ಗೆ `ಪ್ರಜಾವಾಣಿ~ ಜತೆ ಸಂತಸ ಹಂಚಿಕೊಂಡ ಸಾಗರ್ `ರ್ಯಾಂಕ್ ಗಳಿಸುವ ಭರವಸೆ ನನಗೆ ಇತ್ತು. ಮೊದಲಿನಿಂದಲೂ ದಿನನಿತ್ಯ 4-5 ಗಂಟೆ ಕಾಲ ಅಭ್ಯಾಸ ಮಾಡುತ್ತಿದ್ದೆ. ಶ್ರಮಕ್ಕೆ ತಕ್ಕ ಪ್ರತಿಫಲ ದೊರೆತಿದೆ~ ಎಂದರು.
ರ್ಯಾಂಕ್ ನಿರೀಕ್ಷೆಯಲ್ಲಿದ್ದ ಅದಿತಿ, `ಪರೀಕ್ಷೆಯ ಭಯ ವಿದ್ಯಾರ್ಥಿಗಳಲ್ಲಿ ಸಾಮಾನ್ಯ. ಭಯ ಬಿಟ್ಟು ಧೈರ್ಯದಿಂದ ಪರೀಕ್ಷೆ ಎದುರಿಸಿದರೆ ಹೆಚ್ಚಿನ ಅಂಕ ಗಳಿಸಲು ಸಾಧ್ಯ~ ಎಂದರು.
ಇವರಿಬ್ಬರಿಗೂ ಚೆನ್ನೈನಲ್ಲಿರುವ `ಐಐಟಿ- ಮದ್ರಾಸ್~ ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುವ ಹಂಬಲವಿದೆ. ದೆಹಲಿಯಲ್ಲಿನ `ವಾಸ್ತುಶಿಲ್ಪ ಶಾಲೆ~ಯಲ್ಲಿ ಉನ್ನತ ಅಧ್ಯಯನ ನಡೆಸುವ ಹಂಬಲ ಪೃಥ್ವಿ ಅವರದ್ದು.
ದೇಶದಾದ್ಯಂತ ಸುಮಾರು 11 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.