ನವದೆಹಲಿ (ಪಿಟಿಐ): ಸುಧಾರಣೆಗಳನ್ನು ತರುವಾಗ ಪ್ರಜಾಪ್ರಭುತ್ವದ ಅಂಗ ಸಂಸ್ಥೆಗಳ ಮಹತ್ವ ಕಡಿಮೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಹೇಳಿದ್ದಾರೆ.
63ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಬುಧವಾರ ರಾತ್ರಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಈ ಸಲಹೆ ನೀಡಿದ್ದಾರೆ. ಪ್ರಬಲ ಲೋಕಪಾಲ ಮಸೂದೆಗೆ ಸಂಬಂಧಿಸಿದ ಜನಾಂದೋಲನವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, `ಮರದಲ್ಲಿನ ಕೆಟ್ಟ ಹಣ್ಣನ್ನು ಕೆಡವಲು ಮರವನ್ನೇ ಉರುಳಿಸುವುದು ಸರಿಯಲ್ಲ~ ಎಂದರು.
`ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ನಾವು ಹೆಮ್ಮೆ ಪಡಬಹುದು. ಆದರೆ ಯಾವುದೇ ಸಕ್ರಿಯ ಪ್ರಜಾಪ್ರಭುತ್ವ ವ್ಯವಸ್ಥೆ ಒತ್ತಡ ಮತ್ತು ಸವಾಲುಗಳನ್ನು ಎದುರಿಸುತ್ತಲೇ ಇರುತ್ತದೆ. ತಾತ್ಕಾಲಿಕ ಒತ್ತಡಗಳನ್ನು ನಿಭಾಯಿಸುವ ನಿಟ್ಟಿನಲ್ಲಿ ದೀರ್ಫಕಾಲೀನ ಗುರಿಗಳನ್ನು ಮರೆಯಬಾರದು. ರಾಷ್ಟ್ರೀಯ ಹಿತಾಸಕ್ತಿಯತ್ತ ಎಲ್ಲರೂ ಕೈಜೋಡಿಸಿ ದುಡಿಯಬೇಕು~ ಎಂದು ಅವರು ಕರೆ ನೀಡಿದರು.
ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರು ಮತ್ತೊಬ್ಬರ ದೃಷ್ಟಿಕೋನವನ್ನು ಗೌರವಿಸಬೇಕು. ಭಾರತದ ಬೃಹತ್ ದೇಶದಲ್ಲಿ ಭಿನ್ನಾಭಿಪ್ರಾಯಕ್ಕಿಂತ ಒಗ್ಗಟ್ಟು ಮೂಲಮಂತ್ರವಾಗಬೇಕು ಎಂದು ರಾಷ್ಟ್ರಪತಿ ಆಗ್ರಹಿಸಿದರು.