ಎಚ್.ಡಿ.ಕೋಟೆ: ತಾಲ್ಲೂಕಿನ ಶಾಂತಿಪುರ ಗ್ರಾಮದ ಜಮೀನೊಂದರಲ್ಲಿ ಗಂಡು ಆನೆ ಮರಿಯೊಂದು ಶನಿವಾರ ಮೃತಪಟ್ಟಿರುವ ಘಟನೆ ನಡೆದಿದೆ.ಸುಮಾರು 4 ತಿಂಗಳ ಆನೆ ಮರಿಯು ಗ್ರಾಮದ ಸರ್ವೆ ನಂ. 11 ರ ಬೋಗಯ್ಯ ಬಿನ್ ನಂಜಯ್ಯ ಎಂಬುವವರ ಜಮೀನಿನಲ್ಲಿ ಮೃತಪಟ್ಟಿದ್ದು, ಈ ಆನೆ ಮರಿಯ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.
ಆನೆಯ ನಾಲಿಗೆಯು ಹೊರ ಬಂದಿರುವುದು ಹಾಗೂ ಆನೆ ಮೃತಪಟ್ಟಿರುವ ಜಾಗದಲ್ಲಿ 10ಕ್ಕೂ ಹೆಚ್ಚು ಕಾಡಾನೆಗಳು ಕಾದಾಟ ನಡೆಸಿದ ಕುರುಹುಗಳು ಇವೆ. ಹಾಗಾಗಿ ಆನೆಗಳ ನಡುವೆ ನಡೆದ ಕಾಳಗದಲ್ಲಿ ಈ ಮರಿ ಆನೆ ಸಿಕ್ಕಿ ಮೃತ ಪಟ್ಟಿರಬಹುದು ಎಂದು ಶಂಕಿಸಲಾಗಿದೆ.
ಶನಿವಾರ ಮುಂಜಾನೆ ಸುಮಾರು 1 ಗಂಟೆಯಲ್ಲಿ ಆನೆಗಳು ಕಾದಾಟ ನಡೆಸುತ್ತಿದ್ದ ಶಬ್ಧ ಕೇಳುತ್ತಿತ್ತು. ಪಕ್ಕದ ಮೇಟಿಕುಪ್ಪೆ ವನ್ಯಜೀವಿ ವಲಯ ವ್ಯಾಪ್ತಿಯ ಕಾಡಿನಿಂದ ಈ ಆನೆಗಳು ಬರುವುದು ಸಾಮಾನ್ಯವಾಗಿದೆ~ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.
ಎಸಿಎಫ್ ತಮ್ಮಯ್ಯ ~ಪ್ರಜಾವಾಣಿ~ಯೊಂದಿಗೆ ಮಾತನಾಡಿ, ~ಈ ಮರಿ ಆನೆಗೆ ಮೊದಲೆ ಕಣ್ಣಿನ ಒಂದು ಭಾಗಕ್ಕೆ ಗಾಯವಾಗಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ~ ಎಂದರು. ಪ್ರಾದೇಶಿಕ ಅರಣ್ಯ ವಿಭಾಗದ ಪ್ರಭಾರ ಅರಣ್ಯಾಧಿಕಾರಿ ಮೋಹನ್ಕುಮಾರ್, ವನಪಾಲಕ ರಂಗಸ್ವಾಮಿ, ಅರಣ್ಯ ರಕ್ಷಕ ಹರ್ಷಕುಮಾರ್, ಸಣ್ಣಸ್ವಾಮಿನಾಯಕ, ರಾಜು ಸಾಗರ್, ಗ್ರಾಮಸ್ಥರು ಹಾಜರಿದ್ದರು.
ತಾಲ್ಲೂಕಿನ ಪಶು ವೈದ್ಯ ವೆಂಕಟರಾಮು ಹಾಗೂ ಅರಣ್ಯ ಇಲಾಖೆಯ ಪಶು ವೈದ್ಯಾಧಿಕಾರಿ ಡಾ. ರಮೇಶ್ ಮರಣೋತ್ತರ ಪರೀಕ್ಷೆ ನಡೆಸಿದರು.