ಬೆಂಗಳೂರು: `ಸಿ.ಎಂ. ನನ್ನೊಂದಿಗೆ ರಾಜಿ ಮಾಡಿಕೊಳ್ಳುವ ಯತ್ನ ನಡೆಸಿದ್ದರು~ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಸಿಡಿಸಿರುವ ಬಾಂಬ್ಗೆ ಪ್ರತ್ಯುತ್ತರ ನೀಡಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, `ನೀವು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದು ಸತ್ಯವೇ ಆಗಿದ್ದಲ್ಲಿ, ಅದೇ ಮಾತನ್ನು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಎದುರು ಹೇಳಿ~ ಎಂದು ಸವಾಲು ಹಾಕಿದ್ದಾರೆ.
ಕೇರಳದಲ್ಲಿ ವಿಶ್ರಾಂತಿ ಪಡೆಯುತ್ತಿರುವ ಯಡಿಯೂರಪ್ಪ ಅವರು, ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಆಡಿರುವ ಮಾತುಗಳಿಗೆ ಪ್ರತಿಕ್ರಿಯಿಸಿ ಶುಕ್ರವಾರ ಬಹಿರಂಗ ಪತ್ರ ಬರೆದಿದ್ದಾರೆ.
`ನನಗೆ ದೇವರಲ್ಲಿ ನಂಬಿಕೆ ಇದೆ, ನಿಮಗೂ ಇದೆ ಎಂದು ನಂಬಿದ್ದೇನೆ. ನಾವಿಬ್ಬರೂ ಧರ್ಮಸ್ಥಳದಲ್ಲಿ ಯಾವ ಸಮಯದಲ್ಲಿ ಭೇಟಿಯಾಗಬಹುದು ಎಂದು ನೀವೇ ಸೂಚಿಸಿ. ಧೈರ್ಯವಿದ್ದರೆ ನೀವು ನನ್ನ ವಿರುದ್ಧ ಆಡಿರುವ ಮಾತುಗಳನ್ನು ಮಂಜುನಾಥ ಸ್ವಾಮಿಯ ಎದುರೂ ಆಡಿ~ ಎಂದು ಯಡಿಯೂರಪ್ಪ ಪಂಥಾಹ್ವಾನ ನೀಡಿದ್ದಾರೆ.
`ನಾನು, ರಾಜಿ ಮಾಡಿಕೊಳ್ಳಲು ಮುಂದಾಗಿದ್ದೆ ಎಂದಿರುವುದು ಸಂಪೂರ್ಣ ಆಧಾರರಹಿತ ಎಂದು ಯಾವುದೇ ಸಂದರ್ಭದಲ್ಲೂ ದೇವರೆದುರು ಪ್ರಮಾಣ ಮಾಡಿ ಹೇಳಲು ಸಿದ್ಧ~ ಎಂದಿದ್ದಾರೆ.