ಗುಂಡ್ಲುಪೇಟೆ : ತಾಲ್ಲೂಕಿನ ದಲಿತರ ಶ್ರೇಯೋಭಿವೃದ್ಧಿಗಾಗಿ ಕಳೆದ 3 ದಶಕಗಳಿಂದ ಶ್ರಮಿಸುತ್ತಿರುವ ಶಾಸಕ ಎಚ್.ಎಸ್. ಮಹದೇವಪ್ರಸಾದ್ ವಿರುದ್ಧ ಬಹುಜನ ಸಮಾಜ ಪಕ್ಷದ ಪ್ರಧಾನ ಕಾರ್ಯದರ್ಶಿ ಕಾಂತರಾಜು ಅಸುರ ನೀಡಿರುವ ಹೇಳಿಕೆ ಹಾಸ್ಯಾಸ್ಪದವಾಗಿದೆ ಎಂದು ಮಾಜಿ ಸಂಸದ ಎ. ಸಿದ್ಧರಾಜು ತಿಳಿಸಿದ್ದಾರೆ.
ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಟ್ಟಣದಲ್ಲಿ 1.25 ಕೋಟಿ ರೂಪಾಯಿ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಸೇರಿದಂತೆ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸಮುದಾಯ ಭವನ ಹಾಗೂ ವಸತಿ ಸೌಲಭ್ಯ ಗಳನ್ನು ಮಾಡಿದ್ದು, ದಲಿತರ ದನಿಯಾಗಿದ್ದಾರೆಯೇ ಹೊರತು ದಲಿತ ವಿರೋಧಿಯಲ್ಲ ಎಂದು ತಿಳಿಸಿದ್ದಾರೆ.
ಪಟ್ಟಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಭವನವನ್ನು ಈಗಾಗಲೇ ಎಲ್ಲಾ ಸಮುದಾಯದ ಜನರು ಸದುಪಯೋಗ ಮಾಡಿ ಕೊಳ್ಳುತ್ತಿದ್ದಾರೆ, ಇಲ್ಲಿಗೆ ಸಮಿತಿ ನೇಮಿಸುವಾಗ ಸರ್ಕಾರಿ ಅಧಿಕಾರಿಗಳನ್ನು ಗಣನೆಗೆ ತೆಗೆದುಕೊಂಡಿದ್ದು, ಅಧಿಕಾರೇತರ ಮೂವರು ಸದಸ್ಯರನ್ನು ಆಯ್ಕೆ ಮಾಡುವಾಗ ಜನಪ್ರತಿನಿಧಿಯಾದ ಶಾಸಕರ ಸಲಹೆಯನ್ನು ಪಡೆದುಕೊಂಡಿದ್ದಾರೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಸೇರಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಕಳೆದ ಮೂರು ದಶಕಗಳಿಂದಲೂ `ಜವಾಬ್ಧಾರಿಯುತ ಶಾಸಕರಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿಯುತ್ತಿರುವ ಇವರ ಏಳಿಗೆಯನ್ನು ಸಹಿಸದೇ ಈ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.
ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ಬಿ.ಕೆ. ಬೊಮ್ಮಯ್ಯ, ಪುರಸಭಾ ಮಾಜಿ ಸದಸ್ಯ ಅಣ್ಣಯ್ಯಸ್ವಾಮಿ, ಪುರಸಭಾ ಸದಸ್ಯ ಶಿವಸ್ವಾಮಿ ಮುಂತಾದವರು ಹಾಜರಿದ್ದರು.