ಧನ್ಬಾದ್/ಜಾರ್ಖಂಡ್(ಪಿಟಿಐ): ಸಿಪಿಎಂ ಜತೆ ವಿಲೀನ ಹೊಂದುವ ಬಗ್ಗೆ ತಮ್ಮ ಪಕ್ಷ ಪ್ರಸ್ತಾವ ಸಲ್ಲಿಸಿತ್ತು ಎಂಬ ಹೇಳಿಕೆಗಳನ್ನು ಸಿಪಿಎಂ ಪಾಲಿಟ್ಬ್ಯೂರೊ ಸದಸ್ಯೆ ಬೃಂದಾ ಕಾರಟ್ ಅಲ್ಲಗಳೆದಿದ್ದಾರೆ.
ಸಿಪಿಎಂ ಪಕ್ಷವಾಗಲೀ ಅಥವಾ ವೈಯಕ್ತಿಯಕವಾಗಿ ಮುಖಂಡ ಸೀತಾರಾಂ ಯೆಚೂರಿ ಅವರಾಗಲೀ ಈ ಕುರಿತು ಯಾವುದೇ ನಿರ್ಣಯ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಆದರೆ ರಾಷ್ಟ್ರೀಯ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಜಂಟಿ ಹೋರಾಟ ನಡೆಸುವುದು ಪ್ರಸ್ತುತ ಎರಡೂ ಪಕ್ಷಗಳ ಮುಂದಿರುವ ಗುರಿ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಮತ್ತು ಕೇರಳ ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದರಿಂದ ಪಕ್ಷದ ಸ್ಥೈರ್ಯ ಕುಸಿದಿಲ್ಲ ಎಂದು ಸಮರ್ಥಿಸಿಕೊಂಡ ಬೃಂದಾ, ಲೋಕಪಾಲ್ ಮಸೂದೆ ವ್ಯಾಪ್ತಿಗೆ ಪ್ರಧಾನಿ ಅವರನ್ನೂ ಒಳಪಡಿಸಬೇಕೆಂಬ ನಾಗರಿಕ ಸಮಿತಿ ಒತ್ತಾಯವನ್ನು ಪಕ್ಷ ಬೆಂಬಲಿಸುತ್ತದೆ ಎಂದರು.
`ಸಂತ್ರಸ್ತರ ತೆರವು, ಸ್ಥಳಾಂತರ ಮತ್ತು ಪುನರ್ವಸತಿ~ ಕುರಿತು ಸಿಪಿಎಂ ಮತ್ತು ಸಿಪಿಐಗಳು ಸೇರಿ ಈ ಗಣಿ ಪಟ್ಟಣದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಬೃಂದಾ ಇಲ್ಲಿಗೆ ಆಗಮಿಸಿದ್ದರು.