ಮಾಲೂರು: ಗಣೇಶ ಹಬ್ಬದ ಅಂಗವಾಗಿ ಮಂಗಳವಾರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ತಾಲ್ಲೂಕಿನ ಲಿಂಗಾಪುರ ಗ್ರಾಮದಲ್ಲಿ ವಿನಾಯಕ ಯುವ ಮಂಡಳಿ ವತಿಯಿಂದ ಮಂಗಳವಾರ ಎಣ್ಣೆ ಮಲ್ಲಗಂಭ ಕ್ರೀಡೆ ಹಮ್ಮಿಕೊಳ್ಳಲಾಗಿತ್ತು.
30 ಅಡಿ ಎತ್ತರದ ಮರದಗಂಬಕ್ಕೆ ಗ್ರೀಸ್ ಮತ್ತು ಎಣ್ಣೆ ಹಚ್ಚಿ ಮರದ ಕಡೆಯ ಭಾಗದಲ್ಲಿ ಎಣ್ಣೆಯ ಚೀಲವನ್ನು ಕಟ್ಟಿ ಮರದ ಮೇಲೆ ಎಣ್ಣೆ ಸುರಿಯುವ ಹಾಗೆ ಏರ್ಪಡಿಸಲಾಗಿತ್ತು. ಮರದ ತುದಿ ಭಾಗದಲ್ಲಿ 10 ಸಾವಿರ ಹಣದ ಚೀಲವನ್ನು ಕಟ್ಟಲಾಗಿತ್ತು.
ತಾಲ್ಲೂಕಿನ ಚಿಕ್ಕಕಡತೂರು, ಮಲಿಯಪ್ಪನಹಳ್ಳಿ ಮತ್ತು ಲಿಂಗಾಪುರದ ಯುವಕರು ಭಾಗವಹಿಸಿದ್ದರು. ಯುವಕರು ಮರ ಹತ್ತುವಾಗ ನೀರನ್ನು ಎರಚಲಾಗುತ್ತಿತ್ತು. ಒಬ್ಬರ ಮೇಲೆ ಒಬ್ಬರು ನಿಂತು ಇನ್ನೇನು ಮರದ ತುದಿಯನ್ನು ಮುಟ್ಟುವ ಹಂತದಲ್ಲಿ ಜಾರಿ ಬೀಳುತ್ತಿದ್ದರು. ಯುವಕರ ತಂಡ ಕೊನೆಗೂ ಗುರಿಮುಟ್ಟುವಲ್ಲಿ ಯಶಸ್ವಿಯಾಯಿತು.
ವಿನಾಯಕ ಯುವ ಮಂಡಳಿ ಮುನಿರಾಜು, ಬಾಬು, ಶ್ರೀನಿವಾಸ್, ಮಂಜು, ಅಂಬರೀಷ್, ನಂದೀಶ್, ರಾಜಪ್ಪ, ಕುಮಾರ್ ಉಪಸ್ಥಿತರಿದ್ದರು.