ಅಂಕೋಲಾ: ಕಿಲಾರಿ ತಳಿಯ 12 ಎತ್ತುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರನ್ನು ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 63ರ ಸುಂಕಸಾಳದ ಸಬಗುಳಿ ಯಲ್ಲಿ ಸೋಮವಾರ ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.
12 ಎತ್ತುಗಳ ಮೌಲ್ಯ ₨3.60 ಲಕ್ಷ ಎಂದು ಅಂದಾಜಿಸಲಾಗಿದೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಯರಗಟ್ಟಿಯಿಂದ ಭಟ್ಕಳದ ಕಸಾಯಿ ಖಾನೆಗೆ ಈ ಎತ್ತುಗಳನ್ನು ಲಾರಿಯಲ್ಲಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ.
ವಾಹನ ಚಾಲಕ ಬೆಳಗಾವಿ ಖಾನಾಪುರದ ಯಾಸೀನ್ ಮುಗ್ದುಮ್ ಸಾಬ್ ದೊಡ್ಮನಿ, ಕ್ಲೀನರ್ ಧಾರವಾಡ ಗರಗದ ಗಜಬಾರಿ ದಾದಾಸಾಬ್ ಬೇಪಾರಿ, ಲಾರಿ ಮಾಲೀಕ ಧಾರವಾಡ ಅಳ್ನಾವರ ನೆಹರೂ ನಗರದ ದಾದಾಪೀರ್ ಗೌಸ್ ಮೈದೀನ್ ಗುದಲಿ, ಭಟ್ಕಳದ ಸಿದ್ದಿಕ್ ಸ್ಟ್ರೀಟ್ನ ಮಹಮ್ಮದ್ ಮಜರ್ ಅಮರ ಸಿದ್ದಿಕ್ ಬಂಧಿತ ಆರೋಪಿಗಳು.
ಪಿ.ಎಸ್.ಐ. ಗೋವಿಂದ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ವಶಪಡಿಸಿಕೊಂಡ ಎತ್ತುಗಳನ್ನು ಕುಮಟಾದ ಅಮೃತಧಾರೆ ಗೋಶಾಲೆಗೆ ಸಾಗಿಸಲಾಗಿದೆ.