ನವದೆಹಲಿ, (ಪಿಟಿಐ): ಅಕ್ರಮ ಸಂತಾನ ಹೊಂದಿರುವ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಧುರೀಣ ಎನ್.ಡಿ. ತಿವಾರಿ ಅವರನ್ನು ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ದೆಹಲಿ ಹೈಕೋರ್ಟ್ ಸೋಮವಾರ ಆದೇಶಿಸಿದೆ.
ಮಂಗಳವಾರ ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಎದುರು ಹಾಜರಾಗಿ ಡಿಎನ್ಎ ಪರೀಕ್ಷೆಗೆ ಸಂಬಂಧಿಸಿದಂತೆ ರಕ್ತ ಸಂಗ್ರಹ ಮತ್ತು ಇತ್ಯಾದಿ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದೆ. ತನ್ನ ತಾಯಿ ಉಜ್ವಲಾದೇವಿ ಜತೆ ಎನ್.ಡಿ. ತಿವಾರಿ ಹೊಂದಿದ್ದ ಸಂಬಂಧದಿಂದ ತಾನು ಜನಿಸಿರುವುದಾಗಿ ರೋಹಿತ್ ಶೇಖರ್ ಹೇಳಿಕೊಂಡಿದ್ದ.
ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಸ್. ರವೀಂದ ಭಟ್ ಅವರನ್ನು ಒಳಗೊಂಡ ಹೈಕೋರ್ಟ್ ಏಕ ಸದಸ್ಯ ಪೀಠ ಡಿಎನ್ಎ ಪರೀಕ್ಷೆಗೆ ಒಳಗಾಗುವಂತೆ ಡಿಸೆಂಬರ್ 23 ರಂದು ಆದೇಶಿಸಿತ್ತು.
‘ಪ್ರತಿ ಮಗುವಿಗೂ ತನ್ನ ತಂದೆ ಮತ್ತು ತಾಯಿ ಯಾರು ಎಂದು ತಿಳಿಯುವ ಅಧಿಕಾರ ಇರುತ್ತದೆ. ಆ ಹಕ್ಕನ್ನು ನಿರಾಕರಿಸಲು ಆಗದು.’ ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
ಡಿಎನ್ಎ ಪರೀಕ್ಷೆಯ ಮುಜುಗರದಿಂದ ತಪ್ಪಿಸಿಕೊಳ್ಳಲು ಏಕ ಸದಸ್ಯ ಪೀಠ ನೀಡಿದ್ದ ಆದೇಶದ ವಿರುದ್ಧ ತಡೆಯಾಜ್ಞೆ ನೀಡುವಂತೆ ಕೋರಿ ತಿವಾರಿ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದರು.
ಸೋಮವಾರ ಈ ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ವಿಕ್ರಮಜಿತ್ ಸೆನ್ ಮತ್ತು ಸಿದ್ಧಾರ್ಥ ಮೃದುಲ್ ಅವರನ್ನು ಒಳಗೊಂಡ ಪೀಠ ಮನವಿಯನ್ನು ತಳ್ಳಿ ಹಾಕಿದೆ.
ಡಿಎನ್ಎ ಪರೀಕ್ಷೆಗೆ ರಕ್ತ ಸಂಗ್ರಹ ಮತ್ತು ಇತ್ಯಾದಿ ಔಪಚಾರಿಕ ಕ್ರಮಗಳನ್ನು ಪೂರ್ಣಗೊಳಿಸಲು ಈ ಮೊದಲೇ ನಿಗದಿಯಾದಂತೆ ಇದೇ ಮಂಗಳವಾರ ಹೈಕೋರ್ಟ್ ಜಂಟಿ ರಿಜಿಸ್ಟ್ರಾರ್ ಎದುರು ಹಾಜರಾಗುವಂತೆಯೂ ಆದೇಶಿಸಿದೆ.
ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ತಿವಾರಿ ಆಂಧ್ರ ಪ್ರದೇಶದ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಿದ್ದರು.