ರಾಯಪುರ/ಹೈದರಾಬಾದ್(ಪಿಟಿಐ): ಛತ್ತೀಸಗಡದ ದಾಂತೆವಾಡ ಜಿಲ್ಲೆಯಲ್ಲಿರುವ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮದ (ಎನ್ಎಂಡಿಸಿ) ಘಟಕದ ಮೇಲೆ ಮಂಗಳವಾರ ರಾತ್ರಿ ಎರಗಿದ ನಕ್ಸಲರು ಕನ್ವೇಯರ್ ಬೆಲ್ಟ ಅನ್ನು ಸುಟ್ಟುಹಾಕಿದ್ದರಿಂದ 40,000 ಟನ್ ಉತ್ಪಾದನೆ ನಷ್ಟವಾಗಿದೆ.
ಬಹೇಲಿ ಕಬ್ಬಿಣ ಅದಿರು ಗಣಿಗೆ ರಾತ್ರಿ 2.30ರ ವೇಳೆಗೆ ನುಗ್ಗಿದ ನಕ್ಸಲರು 80 ಮೀಟರ್ನಷ್ಟು ಉದ್ದದ ಕನ್ವೇಯರ್ ಬೆಲ್್ಟ ಸುಟ್ಟು ಹಾಕಿದ್ದರಿಂದ ಗಣಿ ಚಟುವಟಿಕೆ ಸ್ಥಗಿತವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಶ್ವಕರ್ಮ ಪೂಜೆ ಅಂಗವಾಗಿ ಮಂಗಳವಾರ ಗಣಿ ಘಟಕಕ್ಕೆ ರಜೆ ಇತ್ತು. ಈ ಸಂದರ್ಭವನ್ನು ಬಳಸಿಕೊಂಡ ಮಾವೊವಾದಿಗಳು ರಾತ್ರಿ ಘಟಕಕ್ಕೆ ನುಗ್ಗಿ ಬಹೇಲಿಯ 29ನೇ ನಂಬರಿನ ಕನ್ವೇಯರ್ ಬೆಲ್ಟ್ನ್ನು ಸುಟ್ಟು ಹಾಕಿದರು ಎಂದು ಎನ್ಎಂಡಿಸಿ ಮೂಲಗಳು ಹೇಳಿವೆ.
ಘಟನೆ ನಡೆಯುತ್ತಿದ್ದಂತೆ ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿದವು. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿಯನ್ನೂ ಕಾರ್ಯಾಚರಣೆಗೆ ನಿಯೋಜಿಸಲಾಯಿತು. ಆಮೇಲೆ ಬೇಗನೇ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು ಎಂದು ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಖರೆ ತಿಳಿಸಿದ್ದಾರೆ.
ಕನ್ವೇಯರ್ ಬೆಲ್ಟ್ ಸುಟ್ಟು ಹೋಗಿರುವುದರಿಂದ ಇಲ್ಲಿಂದ ವಿವಿಧೆಡೆಗಳಿಗೆ ಆಗುವ ಅದಿರು ಪೂರೈಕೆ ಎರಡು– ಮೂರು ದಿನಗಳ ಕಾಲ ವ್ಯತ್ಯಯವಾಗಲಿದೆ. ಈ ಬೆಲ್ಟ್ ಮೂಲಕ ಪ್ರತಿದಿನ 20,000 ಟನ್ ಕಬ್ಬಿಣದ ಅದಿರನ್ನು ಸ್ಥಳಾಂತರಿಸಲಾಗುತ್ತಿತ್ತು. ಬೆಲ್ಟ್ ಸರಿಪಡಿಸಲು ಕನಿಷ್ಠ ಎರಡು ದಿನ ಹಿಡಿಯುವುದರಿಂದ ಕನಿಷ್ಠ 40,000 ಟನ್ ಅದಿರು ಪೂರೈಕೆಗೆ ತೊಂದರೆಯಾಗಲಿದೆ. ಮುಂದಿನ ವಾರ ಈ ಕೊರತೆ ಸರಿದೂಗಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟಕದ ಕಾರ್ಯಾಚರಣೆಯು ಶುಕ್ರವಾರದಿಂದ ಭಾಗಶಃ ಆರಂಭವಾಗಲಿದೆ ಎಂದು ಹೇಳಲಾಗಿದೆ.
ಹೋದ ವರ್ಷವೂ ನಡೆದಿತ್ತು: ಮಾವೊವಾದಿಗಳು ಕಳೆದ ವರ್ಷ ದಾಂತೆವಾಡ ಜಿಲ್ಲೆಯ ಕಿರಂದುಲ್ನಲ್ಲಿ ಸಾರ್ವಜನಿಕ ಸ್ವಾಮ್ಯದ ಎನ್ಎಂಡಿಸಿ ಘಟಕದ ಪಹರೆಗಾಗಿ ನಿಯೋಜಿತವಾಗಿದ್ದ ಸಿಐಎಸ್ಎಫ್ ತಂಡದ ಮೇಲೆ ಹಠಾತ್ ಗುಂಡಿನ ದಾಳಿ ನಡೆಸಿ ಏಳು ಯೋಧರನ್ನು ಹತ್ಯೆ ಮಾಡಿದ್ದರು.
ಎನ್ಎಂಡಿಸಿ ಭೀತಿ: ಎನ್ಎಂಡಿಸಿ ಘಟಕಗಳ ಮೇಲೆ ಆಗಾಗ ಇಂತಹ ದಾಳಿ ನಡೆಯುತ್ತಿರುವುದರಿಂದ ಬೈಲಾದಿಲ ವಲಯದಿಂದ ಅದಿರು ಪೂರೈಸಲು ಸ್ವಲ್ಪ ತೊಡಕಾಗುತ್ತಿದೆ. ತನ್ನ ಸಿಬ್ಬಂದಿ ಮತ್ತು ಘಟಕಗಳ ಸುರಕ್ಷತೆಗಾಗಿ ನಿಗಮವು ಸರ್ಕಾರದ ವಿವಿಧ ಇಲಾಖೆಗಳ ಜತೆ ಸತತ ಸಂಪರ್ಕದಲ್ಲಿದೆ. ಛತ್ತೀಸಗಡ ಸರ್ಕಾರ ಮತ್ತು ಕೇಂದ್ರ ಸರ್ಕಾರಗಳು ಆರಂಭಿಸಿರುವ ಪ್ರಯತ್ನಗಳಿಂದಾಗಿ ಶೀಘ್ರವೇ ಸಮಸ್ಯೆ ಪರಿಹಾರವಾಗಬಹುದು ಎಂದು ಎನ್ಎಂಡಿಸಿ ವರದಿಯಲ್ಲಿ ಹೇಳಿತ್ತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.