ಚನ್ನಪಟ್ಟಣ: ಗ್ರಾಮೀಣ ಪ್ರದೇಶದ ಜನರು ಎನ್ಎಸ್ಎಸ್ ಶಿಬಿರಾರ್ಥಿಗಳಿಗೆ ಸಹಕಾರ ನೀಡಬೇಕು ಎಂದು ತಾ.ಪಂ. ಅಧ್ಯಕ್ಷೆ ಜಯಮ್ಮ ಹೇಳಿದರು.
ತಾಲ್ಲೂಕಿನ ಕೋಡಂಬಹಳ್ಳಿಯಲ್ಲಿ ಶನಿವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
`ಗ್ರಾಮೀಣ ಪ್ರದೇಶದ ಸಮಸ್ಯೆಗಳಿಗೆ ಸ್ಪಂದಿಸುವ ಉದ್ದೇಶದಿಂದ ಶ್ರಮದಾನ ಮಾಡಲು ಶಿಬಿರಾರ್ಥಿಗಳು ಆಗಮಿಸಿದ್ದು, ಅವರು ಮಾಡುವ ಕಾರ್ಯಗಳಿಗೆ ಗ್ರಾಮಸ್ಥರು ಕೈಜೋಡಿಸಬೇಕು. ಶ್ರಮದಾನದ ಮಹತ್ವವನ್ನು ಗ್ರಾಮಸ್ಥರು ಅರಿಯಬೇಕು ಎಂದರು.
ಶಿಬಿರದ ಧ್ವಜಾರೋಹಣ ನೆರವೇರಿಸಿದ ಹೆಚ್ಚುವರಿ ಪ್ರಾಂಶುಪಾಲ ಡಾ.ವೆಂಕಟೇಶ್, ಎನ್ಎಸ್ಎಸ್ ಶಿಬಿರದ ಮೂಲಕ ವಿದ್ಯಾರ್ಥಿಗಳು ಆದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಅರ್ಥಶಾಸ್ತ್ರ ಪ್ರಾಧ್ಯಾಪಕ ಪ್ರೊ. ಕೆ.ಎಂ. ಮಾಯಿಗೌಡ, ಗ್ರಾಮಸ್ಥರಿಂದ ಶಿಬಿರಕ್ಕೆ ಸಹಕಾರ ಕೋರಿದರು.
ಕೋಡಂಬಹಳ್ಳಿ ಗ್ರಾ.ಪಂ. ಅಧ್ಯಕ್ಷ ಮದ್ದೂರಯ್ಯ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಯೋಜನಾಧಿಕಾರಿಗಳಾದ ಎ.ಭೀಮಯ್ಯ, ಪ್ರಾಧ್ಯಾಪಕರಾದ ಮಧುಸೂದನಾಚಾರ್ಯ, ಪದ್ಮನಾಭ, ಶ್ರಿಕಾಂತ್, ರವೀಂದ್ರ ಇತರರು ಹಾಜರಿದ್ದರು.
ಎನ್ಎಸ್ಎಸ್ ಕಾರ್ಯಕ್ರಮದ ಅಧಿಕಾರಿ ಆರ್. ಮಹೇಶ್ ಸ್ವಾಗತಿಸಿದರು. ಜಗದೀಶಯ್ಯ ನಿರೂಪಿಸಿದರು. ವಿಶೇಷ ಶಿಬಿರಾಧಿಕಾರಿ ಶ್ರಿಕಾಂತ್ ವಂದಿಸಿದರು.