ಬ್ರಹ್ಮಾವರ: ಸಮಾಜ ಸೇವೆ ಏನು ಎತ್ತ ಎಂಬ ಸಂಪೂರ್ಣ ಜ್ಞಾನ ಇರುವ ವ್ಯಕ್ತಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕೇ ಹೊರತು, ಸಮಾಜಸೇವೆಯ ಕಲ್ಪನೆ ಇಲ್ಲದ ವ್ಯಕ್ತಿ ಐಎಎಸ್ ಮಾಡಿದರೂ ಯಾವುದೇ ಪ್ರಯೋಜನವಿಲ್ಲ. ಸಮಾಜಸೇವೆಗೆ ಮಾನವೀಯತೆ ಅತೀ ಅಗತ್ಯ ಎಂದು ಜಿಲ್ಲಾಧಿಕಾರಿ ಡಾ.ಎಂ.ಟಿ.ರೇಜು ಹೇಳಿದರು.
ಹಾರಾಡಿ ಡಾ.ಎ.ವಿ.ಬಾಳಿಗಾ ಕಾಲೇಜಿನಲ್ಲಿ ಸಮಾಜಕಾರ್ಯ ಮತ್ತು ಮನೋವಿಜ್ಞಾನ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮೂರು ದಿನಗಳ ಕಾಲ ನಡೆಯುವ ಮನೋರೋಗ ಚಿಕಿತ್ಸೆ ಕಾರ್ಯಾಗಾರಕ್ಕೆ ಗುರುವಾರ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜಸೇವೆ ತನ್ನ ವೃತ್ತಿ ಜೀವನ ಎಂದು ಭಾವಿಸಿ ಕರ್ತವ್ಯದಲ್ಲಿ ತೊಡಗಿಸಿಕೊಳ್ಳಬೇಕು. ಪ್ರಸ್ತುತ ದೇಶದಲ್ಲಿರುವ ಎನ್ಜಿಓ ಸಂಸ್ಥೆಗಳು ಕೂಡಾ ಭ್ರಷ್ಟಾಚಾರದಲ್ಲಿ ಮುಳುಗಿವೆ ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ 4 ವರ್ಷಗಳಲ್ಲಿ 154 ದೇವಸ್ಥಾನಗಳ ಅಭಿವೃದ್ಧಿ ಕಾರ್ಯಗಳಿಗೆ 13 ಕೋಟಿ ರೂಪಾಯಿಗಳನ್ನು ಹಂತ ಹಂತವಾಗಿ ಅನುದಾನ ನೀಡಲಾಗುತ್ತಿತ್ತು. ಆದರೆ ಯಾವುದೇ ದೇವಸ್ಥಾನದಲ್ಲಿ ಅಭಿವೃದ್ಧಿ ಕಾರ್ಯ ಮಾಡದೇ ಹಣ ಪಡೆಯಲಾಗುತ್ತಿತ್ತು.
ಕೆಳಮಟ್ಟದಲ್ಲಿಯೇ ಇಷ್ಟೊಂದು ಭ್ರಷ್ಟಾಚಾರ ನಡೆಯುತ್ತಿರುವಾಗ ರಾಜಕೀಯದಲ್ಲಿ ಎಷ್ಟು ಆಗುತ್ತಿರಬಹುದು ಎಂದು ಪ್ರಶ್ನಿಸಿದರು.
ಕಾಲೇಜಿನ ಸಂಚಾಲಕ ಪ್ರೊ.ಪಿ.ವಿ.ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಮನೋವೈದ್ಯ ಡಾ.ಶ್ರೀಪತಿ ಎಂ ಭಟ್, ಬ್ರಹ್ಮಾವರ ಎಸ್ಎಂಎಸ್ ಕಾಲೇಜಿನ ಉಪಪ್ರಾಂಶುಪಾಲ ಡಾ.ಎಚ್.ವಿ.ಸೋಮಯಾಜಿ, ಕಾಲೇಜಿನ ನಿರ್ದೇಶಕ ಡಾ.ಪಿ.ವಿ.ಭಂಡಾರಿ, ಪ್ರಾಂಶುಪಾಲ ಪ್ರೊ.ಚಂದ್ರಶೇಖರ್ ಹೆಬ್ಬಾರ್, ಕಾಲೇಜಿನ ಆಪ್ತ ಸಮಾಲೋಚಕಿ ಸಪ್ನ ಗಣೇಶ್, ಪದ್ಮಾ ಹೇರೂರು ಇದ್ದರು.
ಕಾರ್ಯಾಗಾರದಲ್ಲಿ ಉಡುಪಿ, ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸ್ದ್ದಿದಾರೆ.