ಬೆಂಗಳೂರು: ಸ್ವಯಂ ಸೇವಾ ಸಂಸ್ಥೆಗಳು (ಎನ್ಜಿಒ) ರಾಜ್ಯದಲ್ಲಿ `ಸಮನ್ವಯ ಶಿಕ್ಷಣ ಯೋಜನೆ'ಯ ಅನುಷ್ಠಾನಕ್ಕಾಗಿ ಮಾಡಿರುವ ಅಂದಾಜು 68.34 ಕೋಟಿ ವೆಚ್ಚವನ್ನು ಕೇಂದ್ರ ಸರ್ಕಾರ 15 ದಿನದೊಳಗಾಗಿ ಬಿಡುಗಡೆ ಮಾಡದಿದ್ದರೆ, ಸಂಸ್ಥೆಗಳ ಕಾರ್ಯಕರ್ತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಕರ್ನಾಟಕ ರಾಜ್ಯ ಸ್ವಯಂ ಸೇವಾ ಸಂಸ್ಥೆಗಳ ಒಕ್ಕೂಟ ಎಚ್ಚರಿಕೆ ನೀಡಿದೆ.
ರಾಜ್ಯದ ಪ್ರೌಢಶಾಲೆಗಳಲ್ಲಿ 9-10 ಮತ್ತು 11-12ನೇ ತರಗತಿಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳ ಜೊತೆಗೆ ವ್ಯಾಸಂಗ ಮಾಡುವ ಅಂಗವಿಕಲ ವಿದ್ಯಾರ್ಥಿಗಳಿಗಾಗಿ 2009ರಲ್ಲಿ ಈ ಯೋಜನೆಯನ್ನು ಜಾರಿಗೆ ತರಲಾಯಿತು. ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಸುತ್ತೊಲೆ ಹೊರಡಿಸಲಾಯಿತು ಎಂದು ಒಕ್ಕೂಟದ ಸದಸ್ಯ ವಿಶ್ವೇಶ್ವರಯ್ಯ ಮಠಪತಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಜ್ಯದಲ್ಲಿ 91 ಸ್ವಯಂ ಸೇವಾ ಸಂಸ್ಥೆಗಳು ಯೋಜನೆಯ ಅನುಷ್ಠಾನಕ್ಕಾಗಿ 1226 ಮಂದಿ ಶಿಕ್ಷಕರನ್ನು ನೇಮಿಸಿಕೊಂಡು, 7,606 ಮಕ್ಕಳಿಗೆ ಈ ಯೋಜನೆಯಿಂದ ಸಿಗುವ ಸೌಲಭ್ಯಗಳನ್ನು ನೀಡಲು ಪ್ರಾರಂಭಿದವು. ಆದರೆ ಯೋಜನೆಯ ಅನುಷ್ಠಾನವಾಗಿ 3 ವರ್ಷ ಕಳೆದರೂ ಕೇಂದ್ರ ಸರ್ಕಾರದ ಕಡೆಯಿಂದ ಒಂದು ರೂಪಾಯಿ ಅನುದಾನವೂ ಬಿಡುಗಡೆಯಾಗಲಿಲ್ಲ. ಜೊತೆಗೆ 2013ರ ಮಾರ್ಚ್ನಲ್ಲಿ ಈ ಯೋಜನೆಯನ್ನು `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ'ದ ಅಡಿಯಲ್ಲಿ ನಡೆಸುವುದಾಗಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿತು ಎಂದರು.