ಹೈದರಾಬಾದ್ (ಪಿಟಿಐ): ರಾಜ್ಯ ವಿಭಜನೆ ವಿಷಯವಾಗಿ ಸೀಮಾಂಧ್ರದ ಸದಸ್ಯರ ಜೊತೆಗೆ ತೆಲಂಗಾಣದ ಸದಸ್ಯರು ಸದನದ ಬಾವಿಗಿಳಿದು ಗದ್ದಲ ನಡೆಸಿದರು. ಇದರ ಫಲವಾಗಿ ಆಂಧ್ರ ಪ್ರದೇಶ ವಿಧಾನಸಭೆ ಅಧಿವೇಶನದ ಎರಡನೇ ದಿನವಾದ ಶನಿವಾರವೂ ಯಾವುದೇ ಕಾರ್ಯಗಳಿಲ್ಲದೇ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿತು.
‘ತೆಲಂಗಾಣ ಮರುವಿಂಗಡಣೆ ಮಸೂದೆ (2013)’ಯ ಕರಡನ್ನು ಹಿಂಪಡೆಯುವಂತೆ ಆಗ್ರಹಿಸಿ ಸೀಮಾಂಧ್ರ ಭಾಗದ ತೆಲಗು ದೇಶಂ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷಗಳ ಸದಸ್ಯರು ಸಭಾಧ್ಯಕ್ಷರ ವೇದಿಕೆಗೆ ನುಗ್ಗಿ ಗದ್ದಲ ನಡೆಸಿದರು.
ಇದೇ ವೇಳೆ, ಮಸೂದೆಯನ್ನು ಬೆಂಬಲಿಸಿ ಸದನದ ಬಾವಿಗಿಳಿದ ತೆಲಂಗಾಣ ರಾಷ್ಟ್ರೀಯ ಸಮಿತಿಯ ಶಾಸಕರು, ಕರಡಿನ ಮೇಲೆ ಚರ್ಚೆ ಆರಂಭಿಸುವಂತೆ ಆಗ್ರಹಿಸಿದರು.
ತಲಾ ಒಂದು ಗಂಟೆಗಳ ಕಾಲ ಎರಡು ಬಾರಿ ಸದನದ ಕಲಾಪ ಮುಂದೂಡಿದ ಬಳಿವೂ ಪರಿಸ್ಥಿತಿ ಸುಧಾರಿಸಿದ ಕಾರಣ ಉಪ ಸಭಾಧ್ಯಕ್ಷ ಸ್ಥಾನದಲ್ಲಿದ್ದ ಮಲ್ಲು ಭಟ್ಟಿ ವಿಕ್ರಮಾರ್ಕ್ ಅವರು ಕಲಾಪವನ್ನು ಸೋಮವಾರವರೆಗೂ ಮುಂದೂಡಿದರು.
ಇದಕ್ಕೂ ಮೊದಲು ಸ್ಪೀಕರ್ ನಾಂದೆಡ್ಲ್ ಮನೋಹರ್ ಅವರು, ಸುಗಮ ಕಲಾಪ ನಡೆಸಲು ತಂತಮ್ಮ ಸದಸ್ಯರೊಂದಿಗೆ ಸಹಕರಿಸುವಂತೆ ಎಲ್ಲಾ ಪಕ್ಷಗಳ ಸದನದ ನಾಯಕರಿಗೆ ಮಾಡಿದ ಮನವಿ ಫಲಿಸಲಿಲ್ಲ.