ಬಳ್ಳಾರಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ (ಎಪಿಎಂಸಿ) ಚುನಾವಣೆಯ ಮತ ಎಣಿಕೆಯು ಇದೇ 2ರಂದು ಬೆಳಿಗ್ಗೆ 8ಕ್ಕೆ ನಗರದ ಮುನಿಸಿಪಲ್ ಕಾಲೇಜಿನಲ್ಲಿ ನಡೆಯಲಿದೆ.
ಮತ ಎಣಿಕೆ ವೇಳೆ ಗುರುತಿನ ಪತ್ರವನ್ನು ಹೊಂದಿದ ಅಭ್ಯರ್ಥಿಗಳು ಹಾಗೂ ಎಣಿಕೆ ಏಜೆಂಟರು ಮಾತ್ರ ಮತ ಎಣಕೆ ಸ್ಥಳವನ್ನು ಪ್ರವೇಶಿಸಬಹುದು. ಮತ ಎಣಿಕೆ ಕೇಂದ್ರದೊಳಗೆ ಮೊಬೈಲ್ ಫೋನ್, ಲೇಖನ ಸಾಮಗ್ರಿ, ತಿಂಡಿ- ತಿನಿಸು, ಮಾರಕಾಸ್ತ್ರ, ಸ್ಪೋಟಕ ಸಾಮಗ್ರಿ ಗಳನ್ನು ಕೊಂಡೊಯ್ಯುವುದನ್ನು ನಿಷೇಧಿ ಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ನಿಷೇಧಾಜ್ಞೆ: ತಾಲ್ಲೂಕು ಕೇಂದ್ರ ಗಳಲ್ಲೂ ಮತ ಎಣಿಕೆ ನಡೆಯಲಿದ್ದು, ಬೆಳಿಗ್ಗೆ 7ರಿಂದ ಫಲಿತಾಂಶ ಪ್ರಕಟಣೆ ಆಗುವವರೆಗೆ ನಿಷೇಧಾಜ್ಞೆ ಜಾರಿಗೊಳಿಸ ಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದ್ದಾರೆ.
ನಿಷೇಧಿತ ಪ್ರದೇಶದಲ್ಲಿ ಯಾವುದೇ ವ್ಯಕ್ತಿಗಳು ಗುಂಪು ಕೂಡಬಾರದು. ರಸ್ತೆ, ಸಾರ್ವಜನಿಕ ಸ್ಥಳದಲ್ಲಿ ವಿಜಯೋತ್ಸವ ಆಚರಣೆ, ಜೈಕಾರ ಹಾಕುವುದು, ಪಟಾಕಿ ಸಿಡಿಸುವುದು, ಮೋಟಾರು ಬೈಕುಗಳಲ್ಲಿ ಗುಂಪಾಗಿ ಚಲಿಸಿ ಬಲಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.