ಔರಾದ್: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ) ಹಿಂದೆ ಇರುವ ಹಮಾಲರ ಓಣಿಯಲ್ಲಿ ಮೂಲ ಸೌಲಭ್ಯದ ಕೊರತೆ ಇದೆ.
`ಕೆಲ ವರ್ಷಗಳ ಹಿಂದೆ ಎಪಿಎಂಸಿ ಯವರು ನಮ್ಮ ಕುಟುಂಬದವರಿಗಾಗಿ 30 ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ. ಆದರೆ ಮನೆ ನಮಗೆ ಹಸ್ತಾಂತರ ಮಾಡಿದ ನಂತರ ಅವರು ಇತ್ತ ಕಡೆ ತಿರುಗಿಯೂ ನೋಡುತ್ತಿಲ್ಲ' ಎಂದು ಅಲ್ಲಿನ ಹಮಾಲರ ಕುಟುಂಬಗಳ ಮಹಿಳೆಯರು ದೂರಿದ್ದಾರೆ.
ನಮ್ಮ ಓಣಿ ಊರು ಹೊರಗೆ ಇರುವುದರಿಂದ ಸುತ್ತುಗೋಡೆ ಇಲ್ಲದೆ ರಾತ್ರಿ ವೇಳೆ ಹೊರಗೆ ಬರಲು ಭೀತಿಯಾಗುತ್ತಿದೆ. ಅಕ್ಕಪಕ್ಕದಲ್ಲಿ ಕೆಲ ಮನೆಗಳಾಗಿವೆ. ಈಚೆಗೆ ಹೊಸ ಅಗ್ನಿಶಾಮಕ ಠಾಣೆ ಆಗಿದೆ. ಆದಾಗ್ಯೂ ಪಟ್ಟಣ ಪಂಚಾಯಿತಿಯವರು ಬೀದಿ ದೀಪ ಹಾಕಲು ಮುಂದೆ ಬರುತ್ತಿಲ್ಲ. ಪ್ರತಿ ಮನೆಯಿಂದ ಹಣ ಸಂಗ್ರಹಿಸಿ ಹೊರಗಡೆ ಕಂಬಕ್ಕೆ ದೀಪ ಹಾಕಿಕೊಂಡಿದ್ದೇವೆ ಎಂದು ಅವ್ಯವಸ್ಥೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
200ಕ್ಕೂ ಹೆಚ್ಚು ಜನರು ವಾಸಿಸುವ ಇಲ್ಲಿು ಏಕೈಕ ಕೊಳವೆಬಾವಿಯಲ್ಲಿ ಕಡಿಮೆ ಪ್ರಮಾಣದ ನೀರು ಬರುತ್ತದೆ. ಔರಾದ್ ಪಟ್ಟಣಕ್ಕೆ ನೀರು ಪೂರೈಸುವ ಪೈಪ್ ಓಣಿ ಪಕ್ಕದಿಂದ ಹಾದು ಹೋಗಿದೆ. ಇಲ್ಲೊಂದು ತೊಟ್ಟಿ ನಿರ್ಮಿಸಿ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಂಬಂಧಿತರಿಗೆ ಸಾಕಷ್ಟು ಸಲ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಎಂದು ಇಲ್ಲಿಯ ನಿವಾಸಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ರವಿ ಚವ್ಹಾಣ್ ಅವರನ್ನು ಸಂಪರ್ಕಿಸಿದರೆ ಕೆಲ ಹಮಾಲರು ನಿವೇಶನದ ಕಂತು ಬಾಕಿ ಉಳಿಸಿಕೊಂಡಿದ್ದಾರೆ.
ಆದಾಗ್ಯೂ ಅಲ್ಲಿ ಸುತ್ತಗೋಡೆ ಮತ್ತು ಕುಡಿಯುವ ನೀರಿನ ತೊಟ್ಟಿ ಸೌಲಭ್ಯ ಕಲ್ಪಿಸಲು ಮಾರುಕಟ್ಟೆ ಸಮಿತಿ ಸಭೆಯಲ್ಲಿ ಪ್ರಸ್ತಾವನೆ ಮಂಡಿಸಲಾಗುವುದು. ಈ ಕುರಿತು ಸಮಿತಿ ಅಧ್ಯಕ್ಷರು ಮತ್ತು ಮೇಲಧಿಕಾರಿಗಳ ಗಮನಕ್ಕೂ ತರಲಾ ಗುವುದು ಎಂದು ತಿಳಿಸಿದ್ದಾರೆ.
ಸರ್ಕಾರಿ ಪ್ರೌಢ ಶಾಲೆ ಚನ್ನಬಸವ ವೃತ್ತದಿಂದ ನಾಗಮಾರಪಳ್ಳಿ ಕಲ್ಯಾಣ ಮಂಪಟದ ವರೆಗೆ ರಸ್ತೆ ವಿಸ್ತರಣೆ ಮಾಡಿ ನಡುವೆ ಬೀದಿ ದೀಪ ಹಾಕಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ ವಿದ್ಯಾರ್ಥಿ ಪರಿಷತ್ ಆಗ್ರಹಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.