ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್-1 ರೇಸ್‌ನಿಂದ ದೇಶದ ಜನತೆಗೆ ಯಾವುದೇ ಲಾಭ ಇಲ್ಲ

Last Updated 27 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

 ನವದೆಹಲಿ (ಪಿಟಿಐ): ಭಾನುವಾರ ನಡೆಯಲಿರುವ ಚೊಚ್ಚಲ ಇಂಡಿಯನ್ ಗ್ರ್ಯಾನ್ ಪ್ರಿ ಫಾರ್ಮುಲಾ ಒನ್ ರೇಸ್‌ಗೆ ದೇಶದ ಹೆಚ್ಚಿನ ಕ್ರೀಡಾ ತಾರೆಯರು ಬೆಂಬಲ ಸೂಚಿಸಿದ್ದಾರೆ. ಆದರೆ ಮಾಜಿ ಅಥ್ಲೀಟ್ ಪಿ.ಟಿ. ಉಷಾ ಮಾತ್ರ ಈ ರೇಸ್‌ನ್ನು ಕಟುವಾಗಿ ಟೀಕಿಸಿದ್ದಾರೆ. ಇಂಡಿಯನ್ ಗ್ರ್ಯಾನ್ ಪ್ರಿ ನಡೆಸುವ ಮೂಲಕ ದೊಡ್ಡ ಮೊತ್ತದ ಹಣ ಪೋಲು ಮಾಡಲಾಗುತ್ತಿದೆ ಎಂದಿದ್ದಾರೆ.

`ಈ ರೇಸ್ ಕೆಲವು ಶ್ರೀಮಂತ ವ್ಯಕ್ತಿಗಳು ನಡೆಸುವ ವ್ಯಾಪಾರ. ಭಾರತದ ಶೇ 99ಕ್ಕೂ ಅಧಿಕ ಜನರಿಗೆ ಇದರಿಂದ ಯಾವುದೇ ಲಾಭ ಇಲ್ಲ. ದೊಡ್ಡ ಮೊತ್ತದ ಹಣ ಪೋಲಾಗುತ್ತಿದೆ. ಇದಕ್ಕೂ ಮೊದಲು ಟ್ವೆಂಟಿ-20 ಕ್ರಿಕೆಟ್ ಭಾರತದ ಕ್ರೀಡೆಯ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇದೀಗ ಎಫ್-1 ರೇಸ್ ಆಗಮಿಸಿದೆ. ಇದು ಕಾರ್ಪೊರೇಟ್ ವಲಯದ ಹಣವನ್ನು ಆಕರ್ಷಿಸುತ್ತದೆ. ಕಾರ್ಪೊರೇಟ್ ವಲಯದವರು ದೇಶದಲ್ಲಿ ಕ್ರೀಡೆಯ ಅಭಿವೃದ್ಧಿಗೆ ಹಣ ವ್ಯಯಿಸುವುದು ಅಪರೂಪ. ಭಾರತದಲ್ಲಿ ಕ್ರೀಡೆಗಳನ್ನು ದೇವರೇ ಕಾಪಾಡಬೇಕು~ ಎಂದು ಉಷಾ ನುಡಿದಿದ್ದಾರೆ.

ಮೋಟಾರ್ ರೇಸಿಂಗ್ ಒಂದು ಕ್ರೀಡೆಯೇ ಅಲ್ಲ ಎಂಬುದು ಉಷಾ ಹೇಳಿಕೆ. `ಇದುವರೆಗೆ ನಾನು ಯಾವುದೇ ಮೋಟಾರ್ ಸ್ಪೋರ್ಟ್ಸ್‌ನತ್ತ ಆಸಕ್ತಿ ತೋರಿಲ್ಲ. ಅದನ್ನು ಕ್ರೀಡೆ ಎಂದು ಕರೆಯಲು ನನಗೆ ಇಷ್ಟವಿಲ್ಲ~ ಎಂದು 1984ರ ಲಾಸ್ ಏಂಜಲೀಸ್ ಒಲಿಂಪಿಕ್‌ನ ಮಹಿಳೆಯರ 400 ಮೀ. ಓಟದಲ್ಲಿ ಅಲ್ಪ ಅಂತರದಲ್ಲಿ ಕಂಚಿನ ಪದಕ ಕಳೆದುಕೊಂಡ ಉಷಾ ತಿಳಿಸಿದ್ದಾರೆ.

ನಾರಂಗ್ ಬೆಂಬಲ: ಅದೇ ವೇಳೆ ಪ್ರಮುಖ ಶೂಟರ್ ಗಗನ್ ನಾರಂಗ್ ಎಫ್-1 ರೇಸ್‌ಗೆ ಭಾರತ ಆತಿಥ್ಯ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಇದು ಕೇವಲ ಶ್ರೀಮಂತ ಮತ್ತು ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಸೀಮಿತವಾಗಿರಬಾರದು ಎಂದಿದ್ದಾರೆ.

`ಈ ಕ್ರೀಡೆ ಎಲ್ಲರಿಗೂ ಎಟುಕದು ಎಂಬ ಮಾತಿದೆ. ಹಣ ಇದ್ದರವರಿಗೆ ಮಾತ್ರ ರೇಸ್ ವೀಕ್ಷಿಸಲು ಸಾಧ್ಯ. ಇಂಡಿಯನ್ ಗ್ರ್ಯಾನ್ ಪ್ರಿ ರೇಸ್‌ನ ಟಿಕೆಟ್‌ನ ಬೆಲೆ ಸಿಂಗಪುರ ಗ್ರ್ಯಾನ್ ಪ್ರಿ ರೇಸ್‌ನ ಟಿಕೆಟ್ ಬೆಲೆಗಿಂತಲೂ ದುಬಾರಿಯಾಗಿವೆ ಎಂದು ವಿದೇಶದಲ್ಲಿರುವ ನನ್ನ ಗೆಳೆಯರು ತಿಳಿಸಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು~ ಎಂದು ನಾರಂಗ್ ಹೇಳಿದ್ದಾರೆ.

`ಆದರೆ ಇದು ಮೊದಲ ವರ್ಷದ ರೇಸ್. ಮುಂದಿನ ಋತುಗಳಲ್ಲಿ ಇಂಡಿಯನ್ ಗ್ರ್ಯಾನ್ ಪ್ರಿ ಎಫ್-1 ರೇಸ್ ಸಾಮಾನ್ಯ ಜನರೂ ವೀಕ್ಷಿಸುವಂತಾಗಲು ಸಂಘಟಕರು ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಚೊಚ್ಚಲ ರೇಸ್ ಯಶಸ್ವಿಯಾಗಿ ನಡೆಯುವ ಭರವಸೆ ನನ್ನದು~ ಎಂದಿದ್ದಾರೆ.

ಸಚಿನ್ ತೆಂಡೂಲ್ಕರ್ ಒಳಗೊಂಡಂತೆ ದೇಶದ ಪ್ರಮುಖ ಕ್ರೀಡಾ ತಾರೆಯರು ಎಫ್-1 ರೇಸ್‌ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ದೇಶದ ಕ್ರೀಡೆಯನ್ನು ಇದು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ ಎಂಬುದು ಹೆಚ್ಚಿನವರ ಅಭಿಪ್ರಾಯ.

ಸಂಘಟಕರಾದ ಜೇಪಿ ಸ್ಪೋರ್ಟ್ಸ್ ಇಂಟರ್‌ನ್ಯಾಷನಲ್ ಬುದ್ಧ ಸರ್ಕ್ಯೂಟ್ ನಿರ್ಮಿಸಲು ಮತ್ತು ಇಲ್ಲಿ ಎಫ್-1 ರೇಸ್ ನಡೆಸಲು ಅನುಮತಿ ಪಡೆಯಲು ಸುಮಾರು 2000 ಕೋಟಿ ರೂ. ಖರ್ಚು ಮಾಡಿದೆ. ಗ್ರೇಟರ್ ನೋಯ್ಡಾದಲ್ಲಿರುವ ಬುದ್ಧ ಸರ್ಕ್ಯೂಟ್ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT