ಕೋಲ್ಕತ್ತ (ಪಿಟಿಐ, ಐಎಎನ್ಎಸ್): ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ಎರಡು ದಿನಗಳಿಂದ 18 ಶಿಶುಗಳು ಸಾವಿಗೀಡಾಗಿದ್ದು, ಆಕ್ರೋಶಗೊಂಡ ಸಂಬಂಧಿಕರು ಮತ್ತು ಸ್ಥಳೀಯರು ಗುರುವಾರ ತೀವ್ರ ಪ್ರತಿಭಟನೆ ನಡೆಸಿದರು.
ಘಟನೆಗೆ ಸಿಬ್ಬಂದಿಯ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಆಸ್ಪತ್ರೆಯ ಮುಖ್ಯ ಕಟ್ಟಡದತ್ತ ನುಗ್ಗಿದ ಪ್ರತಿಭಟನಾಕಾರರು, ಮಾರ್ಗದಲ್ಲಿ ರಸ್ತೆತಡೆ ನಡೆಸಿದರು. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಕರಣದ ತನಿಖೆಗೆ ಆದೇಶ ನೀಡಿದ್ದಾರೆ.
`ಬುಧವಾರ 12 ಮಕ್ಕಳು ಹಾಗೂ ಗುರುವಾರ 6 ಮಕ್ಕಳು ಸಾವಿಗೀಡಾಗಿವೆ. ಇದಕ್ಕೆ ಅವಧಿ ಪೂರ್ವ ಜನನ, ಕಡಿಮೆ ತೂಕದಂತಹ ಸಮಸ್ಯೆಗಳು ಕಾರಣ~ ಎಂದು ದೇಶದ ಪೂರ್ವ ಭಾಗದಲ್ಲಿನ ಅತಿ ದೊಡ್ಡ ಮಕ್ಕಳ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿ.ಸಿ.ರಾಯ್ ಆಸ್ಪತ್ರೆಯ ಮೇಲ್ವಿಚಾರಕ ಡಿ.ಪಾಲ್ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ. 2002ರ ಸೆಪ್ಟೆಂಬರ್ನಲ್ಲೂ ಈ ಆಸ್ಪತ್ರೆಯಲ್ಲಿ 14 ಶಿಶುಗಳು ನ್ಯುಮೋನಿಯಾದಿಂದ ಸಾವಿಗೀಡಾಗಿದ್ದವು. ಆಗಲೂ ಸ್ಥಳೀಯರಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿತ್ತು.