ದುಬೈ (ಪಿಟಿಐ): ಶ್ರೀಲಂಕಾ ಕ್ರಿಕೆಟ್ ತಂಡದ ನಾಯಕ ಏಂಜೆಲೊ ಮ್ಯಾಥ್ಯೂಸ್ ಅವರನ್ನು ಎರಡು ಏಕದಿನ ಪಂದ್ಯಗಳಿಂದ ಅಮಾನತು ಮಾಡಲಾಗಿದೆ. ತ್ರಿಕೋನ ಏಕದಿನ ಸರಣಿಯ ಫೈನಲ್ನಲ್ಲಿ ಭಾರತ ವಿರುದ್ಧ ನಿಗದಿತ ಓವರ್ಗಳನ್ನು ಪೂರೈಸಲು ಹೆಚ್ಚಿನ ಸಮಯ ತೆಗೆದುಕೊಂಡ ಕಾರಣ ಐಸಿಸಿ ಮ್ಯಾಚ್ ರೆಫರಿ ಡೇವಿಡ್ ಬೂನ್ ಈ ಶಿಕ್ಷೆ ವಿಧಿಸಿದ್ದಾರೆ.
ತಂಡದ ಉಳಿದ ಆಟಗಾರರ ಮೇಲೆ ಪಂದ್ಯ ಸಂಭಾವನೆಯ ಶೇಕಡಾ 40ರಷ್ಟು ದಂಡ ವಿಧಿಸಲಾಗಿದೆ. ಭಾರತದ ಬ್ಯಾಟಿಂಗ್ ವೇಳೆ ನಿಗದಿಪಡಿಸಲಾಗಿದ್ದ ಸಮಯ ಮುಗಿದಾಗ ಒಂದು ಓವರ್ ಬಾಕಿ ಉಳಿದಿತ್ತು.
ಎರಡನೇ ಬಾರಿ ಈ ರೀತಿ ಆಗಿದ್ದರಿಂದ ಮ್ಯಾಥ್ಯೂಸ್ ಮೇಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ. ಈ ತಿಂಗಳ 20 ಹಾಗೂ 23ರಂದು ಕೊಲಂಬೊದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಮ್ಯಾಥ್ಯೂಸ್ ಆಡುವಂತಿಲ್ಲ.