ಬಿಜಾಪುರದಿಂದ ಯಶವಂತಪುರಕ್ಕೆ ನಿತ್ಯ ಎರಡು ರೈಲುಗಳಿದ್ದು, ಗೋಲಗುಂಬಜ್ ಎಕ್ಸ್ಪ್ರೆಸ್, ಹುಬ್ಬಳ್ಳಿ ಅರಸೀಕೆರೆ ಮಾರ್ಗವಾಗಿ (713 ಕಿ.ಮೀ.), ಬಸವ ಎಕ್ಸ್ಪ್ರೆಸ್: ಸೋಲಾಪುರ ಗುಂತಕಲ್ಲ ಮಾರ್ಗವಾಗಿ ಸಾಗುತ್ತದೆ.(760 ಕಿ.ಮೀ.) ಇವೆರಡು ರೈಲುಗಳು ಬಿಜಾಪುರ ಹಾಗೂ ಬಾಗಲಕೋಟೆ ಜನರಿಗೆ ತುಂಬಾ ದೂರದ ಪ್ರಯಾಣವಾಗಿದೆ.
ಅಲ್ಲದೆ ಬೆಂಗಳೂರು ತಲುಪಲು 15 ರಿಂದ 16 ಗಂಟೆ ಸಮಯ ತೆಗೆದುಕೊಳ್ಳುತ್ತವೆ. ಆದ ಕಾರಣ ಬಸವ ಎಕ್ಸ್ಪ್ರೆಸ್ ರೈಲನ್ನು ಬಿಜಾಪುರದಿಂದ ಪ್ರಾರಂಭಿಸಿ ಗದಗ ಗುಂತಕಲ್ಲು ಮಾರ್ಗವಾಗಿ ಬೆಂಗಳೂರಿಗೆ (680ಕಿ.ಮೀ.) ಬದಲಾಯಿಸಬೇಕು. ಸದ್ಯ ಹೊಸಪೇಟೆ, ಕೊಪ್ಪಳ ಹಾಗೂ ಬಳ್ಳಾರಿ ಮಾರ್ಗದಲ್ಲಿ ಹಂಪಿ ಎಕ್ಸ್ಪ್ರೆಸ್ ಏಕಮಾತ್ರ ರೈಲು ಓಡುತ್ತಿದ್ದು ಈ ಭಾಗಕ್ಕೆ ಇನ್ನೊಂದು ರೈಲು ಅವಶ್ಯಕ.
ಇದಲ್ಲದೆ ಗದಗ -ಸೋಲಾಪುರ- ಗದಗ (ರೈಲು ನಂ. 57642) ಪ್ಯಾಸೆಂಜರ್ ರೈಲನ್ನು ಹೊಸಪೇಟೆವರೆಗೆ (85 ಕಿ.ಮೀ.) ವಿಸ್ತರಿಸಬೇಕು. ಸದ್ಯಕ್ಕೆ ನಿತ್ಯ 19:10ರಿಂದ 02:30ರವರೆಗೆ ಗದಗದಲ್ಲಿ ವ್ಯರ್ಥವಾಗಿ ನಿಲ್ಲಿಸುತ್ತಿದ್ದು ಅದನ್ನೇ ಹೊಸಪೇಟೆವರೆಗೆ ಮುಂದುವರೆಸಿ.
ಈ ಎರಡು ರೈಲುಗಳ ಸಮಯವನ್ನು ಬದಲಾವಣೆ ಮಾಡಿದರೆ ಬಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಅಷ್ಟೆ ಅಲ್ಲದೆ ಗದಗ, ಕೊಪ್ಪಳ ಹಾಗೂ ಬಳ್ಳಾರಿ ವ್ಯಾಪಾರಿಗಳಿಗೆ ರೈತರಿಗೆ ಮಹಿಳೆಯರಿಗೆ ವಯಸ್ಸಾದವರಿಗೆ ತುಂಬಾ ಅನುಕೂಲವಾಗುವುದು.
ಹೊಸಪೇಟೆ, ಕೊಪ್ಪಳ ಹಾಗೂ ಬಳ್ಳಾರಿಯ ಕೈಗಾರಿಕೆಗಳಿಂದ ಜನದಟ್ಟಣೆ ಜಾಸ್ತಿಯಾಗಿದ್ದು ಐತಿಹಾಸಿಕ ಸ್ಥಳಗಳಾದ ಬಿಜಾಪುರ, ಆಲಮಟ್ಟಿ, ಬಾದಾಮಿ, ಐಹೊಳೆ, ಹಂಪಿ, ಹೊಸಪೇಟೆ, ಬಳ್ಳಾರಿಗಳನ್ನು ಒಂದೇ ಮಾರ್ಗದಲ್ಲಿ ರಾಜಧಾನಿಯೊಂದಿಗೆ ಜೋಡಿಸಿದಂತಾಗುವುದು.