ಪಡುಬಿದ್ರಿ: ಇಲ್ಲಿಗೆ ಸಮೀಪದ ತೆಂಕ ಎರ್ಮಾಳು ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸೋಮವಾರ ರಾತ್ರಿ ಲಾರಿ ಹಾಗೂ ಸುಮೊ ಮಧ್ಯೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ.
ಮೃತರನ್ನು ಶಾಜಿ, ಜಯಂತಿ, ಅವರ ಸಹೋದರಿ ಶಾಂತಿ, ವಿಜಯ್ ಎಂದು ಗುರುತಿಸಲಾಗಿದೆ. ಜಯಂತಿ ಅವರ ಪತಿ ರಾಜನ್, ಅವರ ಪುತ್ರರಾದ ಹೃಷಿಕೇಶ್, ಶ್ರೀಕೇಶ್ ಮತ್ತು ಜಯಂತಿ ಅವರ ಸೋದರ ಬಾಬು ಗಾಯಗೊಂಡವರು. ಗಾಯಾಳುಗಳನ್ನು ಮಂಗಳೂರು ಹಾಗೂ ಮಣಿಪಾಲದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಕೇರಳದ ಎರ್ನಾಕುಲ ಜಿಲ್ಲೆಯ ಪೆರಂಬಾವೂರು ಸಮೀಪದ ಮುತ್ತೂರಿನಿಂದ ಕುಂದಾಪುರ ತಾಲ್ಲೂಕಿನ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಕುಟುಂಬ ಸಮೇತ ಸುಮೋದಲ್ಲಿ ಪ್ರಯಾಣಿಸುತಿದ್ದರು. ತೆಂಕ ಎರ್ಮಾಳುವಿನಲ್ಲಿ ಗ್ಯಾಸ್ ಸಿಲಿಂಡರ್ ಹೇರಿಕೊಂಡು ಹೋಗುತ್ತಿದ್ದ ಲಾರಿ, ವಾಹನವೊಂದನ್ನು ಓವರ್ಟೇಕ್ ಮಾಡುವ ಭರಾಟೆಯಲ್ಲಿ ಸುಮೊಗೆ ಡಿಕ್ಕಿ ಹೊಡೆಯಿತು.
ಅಪಘಾತದಿಂದ ಸುಮೊ ವಾಹನ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸುಮೊ ಅವಶೇಷದಲ್ಲಿ ಸಿಲುಕಿದ್ದ. ಸ್ಥಳೀಯರ ಸಹಕಾರದಿಂದ ದೇಹವನ್ನು ಬೇರ್ಪಡಿಸಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಯಿತು.
ಅಪಘಾತದಿಂದ ಹೆದ್ದಾರಿ ಸಂಚಾರ ಕೆಲಕಾಲ ಅಸ್ತವ್ಯವಸ್ಥಗೊಂಡಿತ್ತು. ಈ ವೇಳೆ ಆರೋಗ್ಯ ಕವಚ 108 ಬರದಿದ್ದ ಕಾರಣ ಖಾಸಗಿ ವಾಹನದಲ್ಲಿ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಪಘಾತದ ರಭಸಕ್ಕೆ ಡಿಕ್ಕಿ ಹೊಡೆದ ಲಾರಿ ಮನೆಯೊಂದರ ಸಮೀಪದಲ್ಲೇ ನಿಂತಿದ್ದು, ಅದೃಷ್ಟವಶಾತ್ ಮತ್ತೊಂದು ಅವಘಡ ತಪ್ಪಿತು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.