ರಾಯಚೂರು: ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಹಾಪ್ಕಾಮ್ಸ ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳನ್ನು ಆರಂಭಿಸುವ ಉದ್ದೇಶವಿದೆ ಎಂದು ಕರ್ನಾಟಕ ತೋಟಗಾರಿಕಾ ಮಂಡಳಿ (ಕೆಎಚ್ಎಫ್) ರಾಜ್ಯ ಅಧ್ಯಕ್ಷ ಈಶ್ವರಚಂದ್ರ ಹೊಸಮನಿ ಅವರು ಹೇಳಿದರು.
ಇಲ್ಲಿನ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಗುರುವಾರ ಜಿಲ್ಲಾ ಹಾಪ್ಕಾಮ್ಸ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ಹಣ್ಣು ಮತ್ತು ತರಕಾರಿ ನೂತನ ಮಾರಾಟ ಮಳಿಗೆ ಉದ್ಘಾಟಿಸಿ ಮಾತನಾಡಿದರು.
ರೈತರು ಬೆಳೆದ ಉತ್ಪನ್ನಗಳಿಗೆ ಸೂಕ್ತ ರೀತಿಯ ಮಾರುಕಟ್ಟೆ ಒದಗಿಸಿ ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ಹಾಪ್ಕಾಮ್ಸ ಸಂಸ್ಥೆಯು ಹಣ್ಣು ಮತ್ತು ತರಕಾರಿ ಮಾರಾಟ ಮಳಿಗೆಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ 21 ಜಿಲ್ಲಾ ಕೇಂದ್ರಗಳಲ್ಲಿ ಹಾಪ್ಕಾಮ್ಸ ಮಾರಾಟ ಮಳಿಗೆ ಆರಂಭಿಸಲಾಗಿದೆ. ಈ ಮಾರಾಟ ಮಳಿಗೆಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಕೆಎಂಎಫ್ ಮಾದರಿಯಲ್ಲಿ ವ್ಯಾಪಾರ ವಹಿವಾಟುಗಳನ್ನು ನಡೆಸಲು ಒತ್ತು ಕೊಡಲಾಗಿದೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಸಂಸ್ಥೆಯ ವತಿಯಿಂದ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.
ಹಾಪ್ ಕಾಮ್ಸ ಜಿಲ್ಲಾ ಅಧ್ಯಕ್ಷ ಶಶಿರಾಜ ಮಸ್ಕಿ, ಕೃಷಿ ವಿಶ್ವವಿದ್ಯಾಲಯದ ಡಾ.ಎಲ್.ಬಿ ಹೂಗಾರ, ನಿರ್ದೇಶಕರಾದ ಲಕ್ಷ್ಮಿಕಾಂತರೆಡ್ಡಿ, ಪ್ರಭಾಕರರೆಡ್ಡಿ, ವಿಶ್ವನಾಥರೆಡ್ಡಿ, ರಂಗಪ್ಪ, ಗಂಗಮ್ಮ, ಕೃಷಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಡೀನ್ ಎಸ್.ಕೆ ಮೇಟಿ, ವಿದ್ಯಾರ್ಥಿಗಳ ಕಲ್ಯಾಣಾಧಿಕಾರಿ ನಾಗನಗೌಡ, ಜಿಲ್ಲಾ ಪಂಚಾಯಿತಿ ಸದಸ್ಯ ಮಲ್ಲೇಶ ನಾಯಕ, ಬಿಜೆಪಿ ಮುಖಂಡ ಕಡಗೋಲ ಆಂಜನೇಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.