`ನನ್ನ ತಂದೆ ಪ್ರಭಾಕರ್ ಅವರನ್ನು ಅವರ ಅಭಿಮಾನಿಗಳು ನನ್ನಲ್ಲಿ ಕಾಣುತ್ತಿದ್ದಾರೆ. ಅಂಥ ಅಭಿಮಾನಿಗಳಿಗಾಗಿ ನಾನು ಸಿನಿಮಾ ಮಾಡುತ್ತಿರುವೆ'.
ನಟ ವಿನೋದ್ ಪ್ರಭಾಕರ್ ಅವರ ಮಾತುಗಳಲ್ಲಿ ಭಾವುಕತೆ ಮಡುಗಟ್ಟಿತ್ತು. ಅವರು ನಾಯಕರಾಗಿರುವ `ಗಜೇಂದ್ರ' ಸಿನಿಮಾ ಈ ವಾರ ಬಿಡುಗಡೆ ಆಗುತ್ತಿದೆ. ಪ್ರತಿ ಚಿತ್ರದ ಬಿಡುಗಡೆ ಸಂದರ್ಭದಲ್ಲೂ ಅವರಿಗೆ ಸಹಜವಾಗಿಯೇ ಅಪ್ಪ ನೆನಪಾಗುತ್ತಾರೆ. ತಮ್ಮ ಇಂದಿನ ಸಿನಿಮಾ ಅವಕಾಶಗಳಿಗೆ ಅಪ್ಪನ ಆಶೀರ್ವಾದವೇ ಕಾರಣ ಎನ್ನುವುದು ಅವರ ನಂಬಿಕೆ.
`ಗಜೇಂದ್ರ' ಚಿತ್ರದಲ್ಲಿ ವಿನೋದ್ಗೆ ನಟನೆಗೆ ಸಾಕಷ್ಟು ಅವಕಾಶ ಇರುವ ಪಾತ್ರ ಸಿಕ್ಕಿದೆ. ಸೆಂಟಿಮೆಂಟ್, ರೋಮಾನ್ಸ್, ಆಕ್ಷನ್ ಎಲ್ಲಾ ಅಂಶ ಬೆರೆತ ಪಾತ್ರ ಅವರದಂತೆ. `ಇದು ತಂತ್ರಜ್ಞರ ಸಿನಿಮಾ' ಎಂದು ತಮ್ಮ ಸಿನಿಮಾವನ್ನು ಬಣ್ಣಿಸುವ ಅವರು, ತಮಗೆ ಅವಕಾಶ ನೀಡಿದ ನಿರ್ಮಾಪಕರಿಗೆ ವಂದಿಸಿದರು.
`ಕಠಿಣ ಶ್ರಮ ಇದ್ದರೆ. ಅದಕ್ಕೆ ತಕ್ಕ ಪ್ರತಿಫಲ ಖಂಡಿತ ಸಿಗುತ್ತದೆ' ಎನ್ನುವುದು ನಿರ್ದೇಶಕ ಜೆ.ಜಿ. ಕೃಷ್ಣ ಅವರ ಅನುಭವದ ಮಾತು. ಈ ಚಿತ್ರದ ಕತೆ, ಚಿತ್ರಕತೆ ಬರೆದು ಛಾಯಾಗ್ರಹಣದ ಹೊಣೆಯನ್ನು ಹೊತ್ತುಕೊಂಡಿರುವ ಅವರು ಮೇಕಪ್ಮ್ಯಾನ್ ಬಸವರಾಜ್ ಮತ್ತು ಎಲ್.ಎನ್. ಗೌಡ ಅವರೊಂದಿಗೆ ಚಿತ್ರಕ್ಕೆ ಹಣ ಹೂಡಿದ್ದಾರೆ.
`ಚಿತ್ರದಲ್ಲಿ ಪ್ರಮುಖವಾಗಿ ಭೂ ಮಾಫಿಯಾದ ಕತೆ ಇರುತ್ತದೆ. ಅದರ ನಡುವೆ ರಾಜಕೀಯ, ಸ್ಲಂ ಬದುಕಿನ ಅಂಶಗಳನ್ನು ಅಳವಡಿಸಲಾಗಿದೆ. ತುಂಬಾ ಕಷ್ಟಪಟ್ಟು ಈ ಸಿನಿಮಾ ಮಾಡಿರುವೆ' ಎಂದರು ಕೃಷ್ಣ.
ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನೀಡಿದ್ದಾರೆ. ಡೈಸಿ ಷಾ, ಸ್ವಾತಿ, ಶೋಭರಾಜ್, ಪ್ರಮೋದ್ ಚಕ್ರವರ್ತಿ ಮುಂತಾದವರು ನಟಿಸಿದ್ದಾರೆ.