ಬೆಂಗಳೂರು: `ಬಿಬಿಎಂಪಿಯ ಆರ್ಥಿಕ ಹೊರೆ ಕಡಿಮೆ ಮಾಡಲು ನಗರದಲ್ಲಿರುವ ಎಲ್ಲಾ ವಾರ್ಡ್ಗಳಲ್ಲೂ ಸಾವಯವ ಘನ ತ್ಯಾಜ್ಯ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲಾಗುವುದು~ ಎಂದು ಸಚಿವ ಆರ್. ಅಶೋಕ ಹೇಳಿದರು.
ಜಯನಗರದ ಪಟ್ಟಾಭಿನಗರ ವಾರ್ಡ್ನಲ್ಲಿ ಸಾವಯವ ಘನ ತ್ಯಾಜ್ಯ ಸಂಸ್ಕರಣಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.
`ಪ್ರಥಮ ಹಂತದಲ್ಲಿ ಒಟ್ಟು 16 ವಾರ್ಡ್ಗಳಲ್ಲಿ ಸಂಸ್ಕರಣಾ ಘಟಕನಿರ್ಮಿಸಲಾಗುವುದು. ನಂತರ ಹಂತ ಹಂತವಾಗಿ ಎಲ್ಲಾ ವಾರ್ಡ್ಗಳಿಗೂ ವಿಸ್ತರಿಸಲಾಗುವುದು~ ಎಂದರು.
`ಪಾಲಿಕೆಯು ರಸ್ತೆ ಕಾಮಗಾರಿಗಿಂತಲೂ ಹೆಚ್ಚು ಹಣವನ್ನು ತ್ಯಾಜ್ಯ ವಿಲೇವಾರಿಗೆ ವಿನಿಯೋಗಿಸುತ್ತಿದ್ದು ಈ ದಿಸೆಯಲ್ಲಿ ಘಟಕಗಳು ಉಪಯುಕ್ತವಾಗಿವೆ. ಇದರಿಂದ ಕೃಷಿಯೋಗ್ಯ ಗೊಬ್ಬರ ದೊರೆಯಲಿದೆ~ ಎಂದರು.
ಶಾಸಕ ಬಿ.ಎನ್.ವಿಜಯಕುಮಾರ್ ಮಾತನಾಡಿ, `ಪರಿಸರ ಮಾಲಿನ್ಯ ನಿಯಂತ್ರಣ ಮತ್ತು ನೈರ್ಮಲ್ಯ ಕಾಪಾಡುವ ಅಂಶವನ್ನು ಗಮನದಲ್ಲಿಟ್ಟುಕೊಂಡು ಈ ಘಟಕವನ್ನು ಒಟ್ಟು 40 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಜಯನಗರ 4ನೇ ಬ್ಲಾಕ್ನಲ್ಲಿ ಇಂತಹುದೇ ಘಟಕ ನಿರ್ಮಾಣಗೊಂಡಿದ್ದು, ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇಂತಹ ಘಟಕಗಳು ಎಲ್ಲಾ ವಾರ್ಡ್ನಲ್ಲಿ ಸ್ಥಾಪಿತಗೊಂಡರೆ ಪಾಲಿಕೆಯ ವಾರ್ಷಿಕ ಬಜೆಟ್ನಲ್ಲಿ 200 ಕೋಟಿ ರೂಪಾಯಿ ಹೊರೆ ಕಡಿಮೆಯಾಗಲಿದೆ~ ಎಂದು ವಿವರಿಸಿದರು. ಮೇಯರ್ ಪಿ.ಶಾರದಮ್ಮ, ಉಪಮೇಯರ್ ಎಸ್.ಹರೀಶ್ ಇತರರು ಉಪಸ್ಥಿತರಿದ್ದರು.