ನವದೆಹಲಿ (ಐಎಎನ್ಎಸ್): ಮುಂದಿನ ವರ್ಷದ ಲೋಕಸಭಾ ಚುನಾವಣೆಯ ಉಪಾಂತ್ಯ ಎಂದೇ ಪರಿಗಣಿಸಲಾದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಸಮರದಲ್ಲಿ ಬಿಜೆಪಿಯು ಮಧ್ಯಪ್ರದೇಶದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಂಡು ರಾಜಸ್ತಾನದಲ್ಲಿ ಕಾಂಗ್ರೆಸ್ಸಿನಿಂದ ಅಧಿಕಾರವನ್ನು ಕಿತ್ತುಕೊಂಡಿದೆ. ಆಮ್ ಆದ್ಮಿ ಪಕ್ಷದ (ಎಎಪಿ) ಅದ್ಭುತ ಸಾಧನೆಯ ಪರಿಣಾಮವಾಗಿ ಅಧಿಕಾರಾರೂಢ ಕಾಂಗ್ರೆಸ್ ದೆಹಲಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದು ಹೀನಾಯ ಪರಾಭವ ಅನುಭವಿಸಿದೆ. ಸ್ಪಷ್ಟ ಬಹುಮತ ಸಿಗುವ ಸಾಧ್ಯತೆ ಕಂಡು ಬರದೇ ಇದ್ದರೂ ದೆಹಲಿ ಅಧಿಕಾರದ ಗದ್ದುಗೆ ಹಿಡಿಯುವ ನಿಟ್ಟಿನಲ್ಲಿ ಬಿಜೆಪಿ ಸಜ್ಜಾಗಿದೆ.
ಛತ್ತೀಸ್ ಗಢದಲ್ಲಿ ಕ್ಷಣಕ್ಷಣಕ್ಕೂ ಫಲಿತಾಂಶದ ದಿಕ್ಕು ಬದಲಾಗುತ್ತಿದ್ದು ಕಾಂಗ್ರೆಸ್ ಮತ್ತು ಬಿಜೆಪಿ ತೀವ್ರ ಹಣಾಹಣಿ ನಡೆಸುತ್ತಿವೆ.
ಬಿರುಸಿನ ಚುನಾವಣಾ ಪ್ರಚಾರ ಸಮರದಲ್ಲಿ ಬಿಜೆಪಿಯ ಘೋಷಿತ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ಪ್ರಚಾರ ಸಮರದ ಸೇನಾಧಿಪತ್ಯ ವಹಿಸಿದ್ದ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ರಾಜಸ್ತಾನವನ್ನು ಕಳೆದುಕೊಂಡದ್ದೇಕೆ, ದೆಹಲಿಯಲ್ಲಿ ನೆಲಕಚ್ಚಿದ್ದೇಕೆ ಮತ್ತು ಮಧ್ಯಪ್ರದೇಶದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತು ಹಾಕಲು ಏಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಆತ್ಮಾವಲೋಕನ ಮಾಡಬೇಕಾಗಿದೆ ಎಂದು ಹೇಳಿದ್ದಾರೆ.
'ಮಧ್ಯಪ್ರದೇಶದಲ್ಲಿ ಮತ್ತು ರಾಜಸ್ತಾನದಲ್ಲಿ ಗೆದ್ದವರೆಲ್ಲರಿಗೂ ನಮ್ಮ ಅಭಿನಂದನೆಗಳು' ಎಂದು ಹೇಳಿದ ಕಾಂಗ್ರೆಸ್ ನಾಯಕಿ ಜಯಂತಿ ನಟರಾಜನ್ 'ದೆಹಲಿಯಲ್ಲಿ ಜನತಾ ತೀರ್ಪನ್ನು ನಾವು ಒಪ್ಪಿಕೊಳ್ಳುತ್ತೇವೆ ಮತ್ತು ಫಲಿತಾಂಶವನ್ನು ಪರಿಶೀಲಿಸುತ್ತೇವೆ. ಎಲ್ಲಿ ತಪ್ಪಾಯಿತು ಎಂಬುದನ್ನು ಕಂಡು ಹಿಡಿಯುತ್ತೇವೆ' ಎಂದು ನುಡಿದರು.