ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಇಟಿ ಸಂಘಟನೆಯ ಉಗ್ರನ ಸೆರೆ

Last Updated 8 ಮೇ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಲಷ್ಕರ್-ಎ-ತೊಯ್ಬಾ ಸಂಘಟನೆಗೆ ಸೇರಿದ ಭಯೋತ್ಪಾದಕನೊಬ್ಬನನ್ನು ಕೇಂದ್ರ ಅಪರಾಧ ವಿಭಾಗದ ಪೊಲೀಸರು ಸೋಮವಾರ ಆಡುಗೋಡಿಯಲ್ಲಿ ಬಂಧಿಸಿದ್ದಾರೆ.ಬಂಧಿಸಿರುವ ಆರೋಪಿ ಚಾಮರಾಜಪೇಟೆಯ ಟಿಪ್ಪುನಗರದ ಅಬ್ದುಲ್ ರೆಹಮಾನ್‌ನಿಂದ (25) ಒಂದು ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಕಮಿಷನರ್ ಜ್ಯೋತಿಪ್ರಕಾಶ್ ಮಿರ್ಜಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬಾಲ್ಯದಿಂದಲೇ ಸಣ್ಣಪುಟ್ಟ ಅಪರಾಧ ಪ್ರಕರಣ ಗಳನ್ನು ಮಾಡುತ್ತಿದ್ದ ರೆಹಮಾನ್ ಈವರೆಗೆ ಕೊಲೆ, ಕೊಲೆ ಯತ್ನ, ಕಳ್ಳತನ, ದರೋಡೆ ಯತ್ನ ಸೇರಿದಂತೆ ಏಳಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ.
 ಕೊಲೆ ಪ್ರಕರಣಕ್ಕೆ ವಿಕ್ರಂ ಎಂಬುವವನಿಗೆ ಶಸ್ತ್ರಾಸ್ತ್ರಗಳನ್ನು ನೀಡಿದ ಆರೋಪದ ಮೇಲೆ ಚಂದ್ರಲೇಔಟ್ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿತ್ತು. ಆತನನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿತ್ತು.

`ಜೈಲಿನಲ್ಲಿ ಅಲ್‌ಬದರ್ ಉಗ್ರಗಾಮಿ ಸಂಘಟನೆಗೆ ಸೇರಿದ ಪಾಕಿಸ್ಥಾನದ ಫಹಾದ್ ಮತ್ತು ಬೆಂಗಳೂರಿನ ಅಫ್ಸರ್ ಎಂಬುವರ ಪರಿಚಯ ಮಾಡಿಕೊಂಡಿದ್ದನು. ಅವರಿಬ್ಬರೂ ಈತನಿಗೆ ಮುಸ್ಲಿಂ ಮೂಲಭೂತವಾದದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಪ್ರಚೋದನೆ ನೀಡಿದ್ದರು.

ಜೈಲಿನಲ್ಲಿಯೇ ರೆಹಮಾನ್‌ಗೆ ಜಿಹಾದ್‌ಗೆ ಸಂಬಂಧಿಸಿದ ಪುಸ್ತಕಗಳನ್ನು ಓದಿಸಿ, ಮೊಬೈಲ್‌ನಲ್ಲಿ ವೀಡಿಯೋ ತುಣುಕುಗಳನ್ನು ತೋರಿಸಿ ಆತನ ಮನ ಪರಿವರ್ತಿಸಿದ್ದರು. ನಂತರ ಆತನಿಗೆ ದೂರವಾಣಿ ಮೂಲಕ ಲಷ್ಕರ್-ಎ-ತೊಯ್ಬಾ ಸಂಘಟನೆಯ ಮುಖಂಡ ರೊಂದಿಗೆ ಪರಿಚಯ ಮಾಡಿಸಿದ್ದರು~ ಎಂದು ಮಿರ್ಜಿ ತಿಳಿಸಿದರು.

ನಾಲ್ಕೈದು ತಿಂಗಳ ಹಿಂದೆ ರೆಹಮಾನ್ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆದರೆ, ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ. ಅಲ್ಲದೇ, ಲಷ್ಕರ್-ಎ- ತೊಯ್ಬಾ  ಸಂಘಟನೆಯ ನಾಯಕರಿಗೆ ದೂರವಾಣಿ ಮೂಲಕ ಸಂಪರ್ಕ ಮಾಡಿದ್ದನು.

ಬೆಂಗಳೂರಿನ ಪ್ರಮುಖ ಸ್ಥಳಗಳನ್ನು ಸ್ಫೋಟಿ ಸಲು ಹಾಗೂ ಮುಸ್ಲಿಂ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿ ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ಎಸಗುವಂತೆ ಸಂಘಟನೆಯ ಮುಖಂಡರು ಈತನಿಗೆ  ಹಣ ಕಳುಹಿಸುತ್ತಿದ್ದರು ಎಂದು ತಿಳಿಸಿದರು.

ಪ್ರಮುಖ ಸಂಚು: `ಸಂಘಟನೆಯ ನಾಯಕರು ಇನ್ನೆರಡು ದಿನಗಳಲ್ಲಿ ನಕಲಿ ಪಾಸ್‌ಪೋರ್ಟ್ ಮೂಲಕ ಅಬ್ದುಲ್ ರೆಹಮಾನ್‌ನನ್ನು ಪಾಕಿಸ್ತಾನಕ್ಕೆ ಕರೆದುಕೊಂಡು ಹೋಗುವ ಯೋಚನೆಯಲ್ಲಿದ್ದರು. ರೆಹಮಾನ್‌ಗೆ ಅಲ್ಲಿ ಶಸ್ತ್ರಾಸ್ತ್ರ ತರಬೇತಿ ನೀಡಿ ನಂತರ ದುಷ್ಕೃತ್ಯ ಎಸಗಲು ಭಾರತಕ್ಕೆ ಕಳುಹಿಸಲು ಸಂಚು ರೂಪಿ ಸಿದ್ದರು.

ಅಬ್ದುಲ್ ರೆಹಮಾನ್‌ನ ಮೊಬೈಲ್‌ಗೆ ಬಂದು ಹೋಗಿರುವ ಕರೆಗಳ ಬಗ್ಗೆ ಮಾಹಿತಿ ಕಲೆ ಹಾಕಲಾಯಿತು. ಆತ ಆಡುಗೋಡಿಯ ಮಸೀದಿ ಬಳಿ ಕೋಣೆಯೊಂದರಲ್ಲಿ ವಾಸವಾಗಿರುವುದು ಗೊತ್ತಾಯಿತು ಎಂದು ಪೊಲೀಸರು ತಿಳಿಸಿದರು.

ಅಪರಾಧ ಪೂರ್ವ ವಿಭಾಗದ ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಹಾಗೂ ಡಿಸಿಪಿ ಕೃಷ್ಣಂರಾಜು ಅವರ ಮಾರ್ಗದರ್ಶನದಲ್ಲಿ, ಇನ್ಸ್‌ಪೆಕ್ಟರ್‌ಗಳಾದ ಕೆ.ಸಿ.ಅಶೋಕನ್, ಬಿ. ಬಾಲರಾಜು, ಎನ್.ಬಿ. ಸಕ್ರಿ, ಎಂ.ಕೆ.ತಮ್ಮಯ್ಯ, ಬಾಳೇಗೌಡ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT