ಬೆಂಗಳೂರು: ಆರಂಭದ ಸೆಟ್ನಲ್ಲಿ ಸೋಲು ಕಂಡರೂ ನಂತರ ಚೇತರಿಕೆಯ ಪ್ರದರ್ಶನ ನೀಡಿದ ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ತಂಡ ಕರ್ನಾಟಕ ವಾಲಿಬಾಲ್ ಸಂಸ್ಥೆ ಆಶ್ರಯದಲ್ಲಿ ನಡೆಯುತ್ತಿರುವ ರಾಜ್ಯ `ಎ~ ಡಿವಿಷನ್ ವಾಲಿಬಾಲ್ ಚಾಂಪಿಯನ್ಷಿಪ್ನ ಶನಿವಾರದ ಪಂದ್ಯದಲ್ಲಿ ಗೆಲುವು ಸಾಧಿಸಿತು.
ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಜೀವ ವಿಮಾ ನಿಗಮ 3-2ಸೆಟ್ಗಳಿಂದ ಸೌತ್ ವೆಸ್ಟರ್ನ್ ರೈಲ್ವೆ (ಎಸ್ಡಬ್ಲ್ಯುಆರ್) ತಂಡದ ಎದುರು ಪ್ರಯಾಸದ ಜಯ ಪಡೆಯಿತು. ಎಲ್ಐಸಿ ಮೊದಲ ಸೆಟ್ನಲ್ಲಿ 19-25ರಲ್ಲಿ ಹಿನ್ನಡೆ ಅನುಭವಿಸಿತು. ನಂತರ 25-13 ಮತ್ತು 25-22ರಲ್ಲಿ ಸತತ ಎರಡು ಸೆಟ್ಗಳಲ್ಲಿ ಜಯ ಸಾಧಿಸಿ 2-1ರಲ್ಲಿ ಮುನ್ನಡೆ ಪಡೆಯಿತು. ಆದರೆ, ರೈಲ್ವೆ ತಂಡ ನಾಲ್ಕನೇ ಸೆಟ್ನಲ್ಲಿ 25-19ರಲ್ಲಿ ಗೆಲುವು ಸಾಧಿಸಿ ಎಲ್ಐಸಿಗೆ ತಿರುಗೇಟು ನೀಡಿತು.
ಒಟ್ಟು 105 ನಿಮಿಷ ನಡೆದ ಈ ಪಂದ್ಯದ ನಿರ್ಣಾಯಕ ಐದನೇ ಸೆಟ್ನಲ್ಲಿ ಎಲ್ಐಸಿ 18-16ರಲ್ಲಿ ಜಯ ಸಾಧಿಸಿ ಎದುರು ಗೆಲುವಿನ ನಗೆ ಬೀರಿತು. ವಿಜಯಿ ತಂಡದ ವಿಕ್ರಮ್ ಹಾಗೂ ಅವಿನಾಶ್ ಶೆಟ್ಟಿ ಉತ್ತಮ ಪ್ರದರ್ಶನ ನೀಡಿದರು. ಇನ್ನೊಂದು ಪಂದ್ಯದಲ್ಲಿ ಬೆಂಗಳೂರು ಸ್ಪೋರ್ಟ್ಸ್ ಹಾಸ್ಟೆಲ್ ತಂಡ 3-1ರಲ್ಲಿ (25-20,15-25,25-17,25-23) ಐಟಿಐ ತಂಡವನ್ನು ಮಣಿಸಿತು. 85 ನಿಮಿಷ ನಡೆದ ಹಣಾಹಣಿಯಲ್ಲಿ ಭರತ್ ಮತ್ತು ನಿಖಿಲ್ ಗಮನ ಸೆಳೆದರು.
ಮರ್ಚಂಟ್ಸ್ ಕ್ಲಬ್ಗೆ ಜಯ: ರಾಜ್ಯ `ಬಿ~ ಡಿವಿಷನ್ ವಾಲಿಬಾಲ್ ಚಾಂಪಿಯನ್ಷಿಪ್ನ ಶನಿವಾರದ ಪಂದ್ಯದಲ್ಲಿ ಮರ್ಚಂಟ್ಸ್ ಸ್ಪೋರ್ಟ್ಸ್ ಕ್ಲಬ್ 3-0ರಲ್ಲಿ (25-18, 25-8, 25-19) ಕೂಡ್ಲಿಗಿ ಸ್ಪೋರ್ಟ್ಸ್ ಮೇಲೆ ಜಯ ಸಾಧಿಸಿತು. ವಿಜಯಿ ತಂಡದ ವರ್ಷಿತ್ ಮತ್ತು ವಿಕಾಸ್ ಉತ್ತಮ ಪ್ರದರ್ಶನ ತೋರಿದರು.