ಗದಗ: ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಗೃಹ ಬಳಕೆಯ ಎಲ್ಪಿಜಿ ಸಿಲಿಂಡರ್ಗೆ ನಿರ್ಬಂಧ ವಿರೋಧಿಸಿ ಬಿಜಿಪಿ ಜಿಲ್ಲಾ ಮಹಿಳಾ ಮೋರ್ಚಾ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ರಸ್ತೆಯಲ್ಲೇ ಅಡುಗೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ನಗರದ ಗಾಂಧಿ ವೃತ್ತದ ಬಳಿ ಜಮಾಯಿಸಿದ ನಗರಸಭೆ ಸದಸ್ಯರು, ಮುಖಂಡರು ಹಾಗೂ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಗಳನ್ನು ಕೂಗಿದರು.
ಕೇಂದ್ರದ ಯುಪಿಎ ಸರ್ಕಾರ ಪದೇ ಪದೇ ಅಗತ್ಯ ವಸ್ತುಗಳ ಬೆಲೆಯನ್ನು ಏರಿಕೆ ಮಾಡುತ್ತಿದೆ. ಇಂಧನ ಮತ್ತು ಗೃಹ ಬಳಕೆಯ ಸಬ್ಸಿಡಿ ಎಲ್ಪಿಜಿ ಸಿಲಿಂಡರ್ ಅನ್ನು ವರ್ಷದಲ್ಲಿ ಆರಕ್ಕೆ ನಿಗದಿಪಡಿಸಿರುವುದನ್ನು ತೀವ್ರವಾಗಿ ಖಂಡಿಸಿದರು. ಹೊಸ ಸಂಪರ್ಕ ಪಡೆಯಲು ಅಲೆದಾಡಬೇಕು ಹಾಗೂ ಹೆಚ್ಚುವರಿ ಸಿಲಿಂಡರ್ಗಾಗಿ ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಭಟನಾ ಕಾರರು ಆಕ್ರೋಶ ವ್ಯಕ್ತಪಡಿಸಿದರು.
ಗಾಂಧಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ರಚಿಸಿದರು. ಬಳಿಕ ರಸ್ತೆಯಲ್ಲೇ ಸೌದೆ ಓಲೆಯಲ್ಲಿ ರೊಟ್ಟಿ ಮತ್ತು ಅನ್ನ ಬೇಯಿಸುವ ಮೂಲಕ ವಿನೂತ ವಾಗಿ ಪ್ರತಿಭಟಿಸಿದರು.
ಕೇಂದ್ರ ಸರ್ಕಾರ ಸಬ್ಸಿಡಿ ಎಲ್ಪಿಜಿ ಬಳಕೆ ನಿರ್ಬಂಧವನ್ನು ಹಿಂದಕ್ಕೆ ತೆಗೆದುಕೊಳ್ಳಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಜಿಲ್ಲಾ ಅಧ್ಯಕ್ಷ ಎಂ.ಎಸ್.ಕರಿಗೌಡರ, ನಗರಸಭೆ ಸದಸ್ಯೆ ಜಯಶ್ರೀ ಉಗಲಾಟ, ವಂದನಾ ವೆರ್ಣೇಕರ್, ಕಮಲಾಕ್ಷಿ, ಪುಷ್ಪಾ ಭಾಗವಹಿಸಿದ್ದರು.