ಮೂಡುಬಿದಿರೆ: ಎಸ್ಕೆಎಫ್ ಶಿಕ್ಷಣ ಪ್ರತಿಷ್ಠಾನ ನಡೆಸಿಕೊಂಡು ಬರುತ್ತಿರುವ ಅಂತರ ಜಿಲ್ಲಾ ಮಟ್ಟದ `ಎಸ್ಕೆಎಫ್ ಕ್ಯಾನ್ ಕ್ರಿಯೇಟ್ 2011~ ವಿದ್ಯಾರ್ಥಿ ಶಿಬಿರ ಭಾನುವಾರ ಎಸ್ಕೆಎಫ್ ಐಟಿಸಿ ಸಭಾಂಗಣದಲ್ಲಿ ಪ್ರಾರಂಭವಾಯಿತು.
ಶಿಬಿರ ಉದ್ಘಾಟಿಸಿದ ಆಲಂಗಾರು ಚರ್ಚ್ ಧರ್ಮಗುರು ಬೇಸಿಲ್ ವಾಸ್ ಮಾತನಾಡಿ, ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಬೆಳಕಿಗೆ ತಂದು ಉತ್ತಮ ವ್ಯಕ್ತಿತ್ವ ರೂಪಿಸುವಲ್ಲಿ ಇಂತಹ ಶಿಬಿರಗಳು ಸಹಕಾರಿಯಾಗುತ್ತವೆ. ವಿದ್ಯಾರ್ಥಿಗಳು ಬದುಕಿನ ಗುರಿಯನ್ನು ಎಳವೆಯಲ್ಲೇ ನಿರ್ಧರಿಸದಿದ್ದರೆ ಮುಂದಿನ ಭವಿಷ್ಯ ಗೊಂದಲಮಯವಾಗಬಹುದು ಎಂದರು.
ಕಾರ್ಕಳ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, ಭಾರತ ಜಗತ್ತಿನಲ್ಲಿಯೇ ಹೆಚ್ಚು ಯುವ ಶಕ್ತಿಯನ್ನು ಹೊಂದಿರುವ ದೇಶ. ಆ ಶಕ್ತಿಯನ್ನು ಸದ್ಬಳಕೆ ಮಾಡಿದರೆ ಮಾತ್ರ ಸಶಕ್ತ ರಾಷ್ಟ್ರ ನಿರ್ಮಾಣ ಸಾಧ್ಯ ಎಂದರು.
ಯುವಶಕ್ತಿಯನ್ನು ಮಾನವ ಸಂಪತ್ತಾಗಿ ಪರಿವರ್ತಿಸಬೇಕು. ಈ ನಿಟ್ಟಿನಲ್ಲಿ ಯುವಕರಿಗೆ ಉತ್ತಮ ಶಿಕ್ಷಣ ನೀಡಬೇಕು. ಜತೆಗೆ ಧನಾತ್ಮಕ ಮಾರ್ಗದರ್ಶನವೂ ದೊರೆಯಬೇಕು ಎಂದರು. ಎಸ್ಕೆಎಫ್ ಸಮೂಹ ಸಂಸ್ಥೆ ಅಧ್ಯಕ್ಷ ಜಿ.ರಾಮಕೃಷ್ಣ ಆಚಾರ್ ಅಧ್ಯಕ್ಷತೆ ವಹಿಸಿದ್ದರು.
ಶಿಬಿರಾಧಿಕಾರಿ ಸೂರ್ಯಕಾಂತ್ ಭಟ್, ಶಿಬಿರ ಸಹಾಯಕ ನಿರ್ದೇಶಕ ಬಿ.ಎ.ಆಚಾರ್, ನಿರ್ದೇಶಕ ಬೈಕಾಡಿ ಜನಾರ್ದನ ಆಚಾರ್ಯ, ಐಟಿಐ ಪ್ರಾಚಾರ್ಯ ಪ್ರದೀಪ್ ಕುಮಾರ್, ಶರತ್ ರಾವ್ ಮತ್ತಿತರರು ಇದ್ದರು.