ಯಲಹಂಕ: `ತಾಯಿ ಹಾಲಿನ ಕೊರತೆಯಿಂದ ಸಾಕಷ್ಟು ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತಿದ್ದು, ತಾಯಂದಿರು ಇದನ್ನು ಅರಿತು ತಮ್ಮ ಮಕ್ಕಳಿಗೆ ತಪ್ಪದೆ ಎದೆಹಾಲು ಉಣಿಸಬೇಕು~ ಎಂದು ಶಾಸಕ ಎಸ್.ಆರ್.ವಿಶ್ವನಾಥ್ ಕರೆ ನೀಡಿದರು.
ರೈತರ ಸೇವಾ ಸಹಕಾರ ಬ್ಯಾಂಕ್ ಸಿಂಗನಾಯಕನಹಳ್ಳಿ (ಚಿಕ್ಕಬೆಟ್ಟಹಳ್ಳಿ ಶಾಖೆ) ಹಾಗೂ ಬಿಬಿಎಂಪಿ ಆರೋಗ್ಯ ಘಟಕದ ಸಂಯುಕ್ತ ಆಶ್ರಯದಲ್ಲಿ ವಡೇರಹಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ `ವಿಶ್ವ ಸ್ತನ್ಯಪಾನ ದಿನಾಚರಣೆ~ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
`ಎಳೆಯ ಕಂದಮ್ಮಗಳಿಗೆ ತಾಯಿಯ ಹಾಲು ಅಮೃತವಿದ್ದಂತೆ. ಇದರಲ್ಲಿ ಹೆಚ್ಚಿನ ಪೌಷ್ಠಿಕತೆ ದೊರೆಯುವುದರ ಜೊತೆಗೆ ಮಕ್ಕಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ~ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ವಾಣಿಶ್ರೀ ವಿಶ್ವನಾಥ್, `ಬಾಣಂತಿಯರು ದೀರ್ಘಕಾಲ ಪೌಷ್ಠಿಕ ಆಹಾರ ಸೇವನೆ ಮಾಡುವುದರಿಂದ ತಮ್ಮ ಮಕ್ಕಳಿಗೆ ಹೆಚ್ಚು ಕಾಲ ಎದೆ ಹಾಲು ಉಣಿಸಲು ಸಹಕಾರಿಯಾಗುತ್ತದೆ. ಇದರಿಂದ ಮಕ್ಕಳ ಆರೋಗ್ಯವಂತ ಬೆಳವಣಿಗೆಗೆ ಸಹಕಾರಿಯಾಗಲಿದೆ~ ಎಂದು ಸಲಹೆ ಮಾಡಿದರು.
ಇದೇ ಸಂದರ್ಭದಲ್ಲಿ ಅಂಬೇಡ್ಕರ್ ವೈದ್ಯಕೀಯ ಕಾಲೇಜಿನ ತಜ್ಞ ವೈದ್ಯರಿಂದ ಹೆಣ್ಣು ಮಕ್ಕಳ ಮತ್ತು ಗರ್ಭಿಣಿ ಸ್ತ್ರೀಯರ ಆರೋಗ್ಯ ತಪಾಸಣೆ ಮತ್ತು ಭಗವಾನ್ ಮಹಾವೀರ್ ಜೈನ್ ಆಸ್ಪತ್ರೆ ವತಿಯಿಂದ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ರಾಗರಂಜಿನಿ ಜಾನಪದ ಕಲಾ ತಂಡ ಸ್ತನ್ಯಪಾನದ ಮಹತ್ವ ಕುರಿತು ನಾಟಕ ಪ್ರದರ್ಶನ ನೀಡಿತು.
ಬೆಂಗಳೂರು ಹಾಲು ಒಕ್ಕೂಟದ ಉತ್ತರ ತಾಲ್ಲೂಕು ನಿರ್ದೇಶಕ ದಿಬ್ಬೂರು ಜಯಣ್ಣ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಡಾ.ಎಸ್.ಸಿದ್ದರಾಮಣ್ಣ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಕೃಷ್ಣಭಟ್, ಬಿಬಿಎಂಪಿ ಆರೋಗ್ಯ ಘಟಕದ ಸಂಯೋಜಕಿ ಡಾ. ಕಾಮೇಶ್ವರಿದೇವಿ, ಗ್ರಾ.ಪಂ. ಅಧ್ಯಕ್ಷ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.