ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ಗೆ ಮಂಜೂರಾಗಿರುವ ಹಣದಲ್ಲಿ ಅವ್ಯವಹಾರ ನಡೆಸಿರುವ ಆರೋಪದ ಮೇಲೆ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ವಿರುದ್ಧ ಸಿವಿಲ್ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.
ಎಸ್.ಎಂ.ಕೃಷ್ಣ, ಚಿತ್ರನಟಿ ಬಿ. ಸರೋಜಾ ದೇವಿ, ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರ ತಾಯಿ ಪುಷ್ಪಾ ದ್ರಾವಿಡ್ ಸೇರಿದಂತೆ 54 ಮಂದಿ ವಿರುದ್ಧ ಚಿತ್ರಕಲಾ ಪರಿಷತ್ನ ಸ್ಥಾಪಕ ಕಾರ್ಯದರ್ಶಿ ಪ್ರೊ. ಎಂ.ಎಸ್ ನಂಜುಂಡ ರಾವ್ ಅವರ ಪುತ್ರಿ ಶ್ರೀದೇವಿ ರಾವ್ ಅರ್ಜಿ ಸಲ್ಲಿಸಿದ್ದಾರೆ.
`ಇವರೆಲ್ಲ ಆಜೀವ ಸದಸ್ಯರು ಎಂದು ಹೇಳಿಕೊಂಡು ಪರಿಷತ್ತಿನ ವಹಿವಾಟಿನಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಆದರೆ ಇವರ ಸದಸ್ಯತ್ವವನ್ನು ಪರಿಷತ್ ಅಂಗೀಕರಿಸಿಲ್ಲ ಎಂಬ ಬಗ್ಗೆ ತಿಳಿದುಬಂದಿದೆ. ಅವರು ಸದಸ್ಯರಾಗಿ ಮುಂದುವರಿದ್ದ್ದಿದರೂ ಅವರ ವಿರುದ್ಧ ಇದುವರೆಗೆ ಯಾವುದೇ ಕ್ರಮ ತೆಗೆದುಕೊಳ್ಳಲಾಗಿಲ್ಲ. ನಗರದಲ್ಲಿನ ಡಾ. ರೋರಿಚ್ ವಸ್ತು ಸಂಗ್ರಹಾಲಯದಲ್ಲಿರುವ ಮೈಸೂರು ಸಂಪ್ರದಾಯದ ಪೇಂಟಿಂಗ್ಗಳು ಇವರ ಬೇಜವಾಬ್ದಾರಿಯಿಂದ ನಾಶವಾಗಿದೆ~ ಎಂದು ಅರ್ಜಿಯಲ್ಲಿ ಅವರು ಆರೋಪಿಸಿದ್ದಾರೆ.
ಇವರು ಪರಿಷತ್ತಿನ ಕಾರ್ಯಚಟುವಟಿಕೆಗಳಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹಸ್ತಕ್ಷೇಪ ಮಾಡದಂತೆ ಆದೇಶಿಸಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.