ಮದ್ದೂರು: ಪುರಸಭೆಯಿಂದ ಶೇ 22.75ರ ಅನುದಾನದ ಅಡಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ನಿರುದ್ಯೋಗಿ ಯುವಕ ಯುವತಿಯರಿಗೆ ವಿವಿಧ ಕೌಶಲ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಪುರಸಭಾಧ್ಯಕ್ಷ ಅಂಕಪ್ಪ ಎ.ಚಂದು ತಿಳಿಸಿದರು.
ಪಟ್ಟಣ ಪುರಸಭೆ ಆವರಣದಲ್ಲಿ ಮಂಗಳವಾರ ಚಾಲಕ ಮರಂಕಯ್ಯ ಅವರಿಗೆ ಹೊಸ ಆಟೊವಿನ ಕೀಲಿ ಕೈಯನ್ನು ಹಸ್ತಾಂತರಿಸಿ ಅವರು ಮಾತನಾಡಿದರು. ಮೊಬೈಲ್, ವಾಷಿಂಗ್ಮಷಿನ್, ರೆಫ್ರಿಜರೇಟರ್ ದುರಸ್ತಿ ಸೇರಿದಂತೆ ವಿವಿಧ ಕೌಶಲ ತರಬೇತಿಯನ್ನು ಉಚಿತವಾಗಿ ನೀಡಲು ಪುರಸಭೆ ಯೋಜಿಸಿದೆ ಎಂದರು.
ಶೇ 22.75ರ ಅನುದಾನದಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಪೀಠೋಪಕರಣ ವಿತರಣೆ ಸೇರಿದಂತೆ ವಿವಿಧ ವರ್ಗದ ಕುಶಲಕರ್ಮಿಗಳಿಗೆ ಹೊಲಿಗೆ ಯಂತ್ರ ಇನ್ನಿತರ ಸಾಮಗ್ರಿಗಳನ್ನು ಉಚಿತವಾಗಿ ವಿತರಿಸಲು ಯೋಜಿಸಲಾಗಿದೆ. ಪುರಸಭೆ ವ್ಯಾಪ್ತಿಯ ಪರಿಶಿಷ್ಟ ಜಾತಿ ಹಾಗೂ ಪಂಗಡದ ಜನರು ಈ ಸವಲತ್ತುಗಳನ್ನು ಪಡೆಯಬಹುದಾಗಿದೆ. ಹೆಚ್ಚಿನ ವಿವರಗಳಿಗೆ ಪುರಸಭಾ ಮುಖ್ಯಾಧಿಕಾರಿಗಳನ್ನು ಸಂಪರ್ಕಿಸಬಹುದಾಗಿದೆ ಎಂದು ವಿವರಿಸಿದರು.
ಸ್ಥಾಯಿ ಸಮಿತಿ ಅಧ್ಯಕ್ಷ ಫರ್ವಿಜ್, ಸದಸ್ಯರಾದ ವೈ.ಬಿ.ಶಂಕರೇಗೌಡ, ಸಂಪಂಗಿರಾಮಯ್ಯ, ಮುಖ್ಯಾಧಿಕಾರಿ ಚಿಕ್ಕನಂಜಯ್ಯ ಇದ್ದರು.