ಕುಂದಾಪುರ: ವಿದ್ಯಾರ್ಥಿಗಳ ಹಕ್ಕು ಹಾಗೂ ಸಮಸ್ಯೆಗಳ ಬಗ್ಗೆ ನಿರಂತರವಾದ ಹೋರಾಟ ಹಾಗೂ ಕಾರ್ಯಕ್ರವನ್ನು ರೂಪಿಸುತ್ತಿರುವ ಭಾರತ ವಿದ್ಯಾರ್ಥಿ ಫೆಡರೇಶನ್ ಪ್ರಾರಂಭದಿಂದಲೂ ಅಭ್ಯಾಸ ಮತ್ತು ಹೋರಾಟ ಧ್ಯೇಯದೊಂದಿಗೆ ವಿದ್ಯಾರ್ಥಿಗಳ ಸಮಸ್ಯೆಗಳ ಪರಿಹಾರಕ್ಕಾಗಿ ಶ್ರಮಿಸಿದೆ ಎಂದು ಕುಂದಾಪುರ ಪುರಸಭಾಧ್ಯಕ್ಷೆ ಕಲಾವತಿ ಯು.ಎಸ್ ಹೇಳಿದರು.
ಕುಂದಾಪುರ ತಾಲ್ಲೂಕು ಎಸ್ಎಫ್ಐ ಆಶ್ರಯದಲ್ಲಿ ನಗರದ ವ್ಯಾಸರಾಜ ಕಲಾಮಂದಿರದಲ್ಲಿ ಇತ್ತೀಚೆಗೆ ನಡೆದ ಅಂತರ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಬೆರಗು –2013’ರ ಸಮಾರೋಪದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಇರುವ ಪ್ರತಿಭೆಗಳನ್ನು ಬಳಸಿಕೊಂಡು ಆರೋಗ್ಯಕರ ಹಾಗೂ ಸೃಜನಶೀಲತೆಯ ಮನರಂಜನೆ ಒದಗಿಸಲು ಸಾಧ್ಯವಿದೆ ಎಂಬುದನ್ನು ಇಲ್ಲಿನ ಎಸ್ಎಫ್ಐ ಬೆರಗು –2013 ಕಾರ್ಯಕ್ರಮವನ್ನು ಸಂಘಟಿಸುವ ಮೂಲಕ ತೋರಿಸಿದೆ ಎಂದರು. ಸಮಾರೋಪದ ಅಧ್ಯಕ್ಷತೆಯನ್ನು ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷ ಬಿ.ಎಂ.ನಾಸೀರ್ ವಹಿಸಿದ್ದರು. ಉದ್ಯಮಿ ದತ್ತಾನಂದ ಜಿ. ಗಂಗೊಳ್ಳಿ ಬಹುಮಾನ ವಿತರಿಸಿದರು.
ಉಡುಪಿ ವಿಭಾಗದ ವಿಮಾ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಗುರುದತ್ ಹಾಗೂ ಡಿವೈಎಫ್ಐನ ಮುಖಂಡ ರಾಜೇಶ್ ವಡೇರಹೋಬಳಿ ಅತಿಥಿಗಳಾಗಿದ್ದರು. ಎಸ್ಎಫ್ಐನ ತಾಲ್ಲೂಕು ಘಟಕದ ಅಧ್ಯಕ್ಷ ಗಣೇಶ್ದಾಸ್, ಕಾರ್ಯದರ್ಶಿ ಶ್ರೀಕಾಂತ ಹೆಮ್ಮಾಡಿ, ಆಫ್ರೀನ್ ಬೇಗಂ, ಮೀನಾಕ್ಷಿ ವೇದಿಕೆಯಲ್ಲಿದ್ದರು.
ಎಸ್ಎಂಎಸ್ ಕಾಲೇಜು ಬ್ರಹ್ಮಾವರ ತಂಡ ಪ್ರಥಮ ಪ್ರಶಸ್ತಿ ಪಡೆಯಿತು. ವೆಂಕಟರಮಣ ಕಾಲೇಜು ತಂಡ ದ್ವಿತೀಯ ಪ್ರಶಸ್ತಿ, ಬಿದ್ಕಲ್ಕಟ್ಟೆ ಕಾಲೇಜು ತೃತೀಯ ಬೆರಗು–2013 ಪ್ರಶಸ್ತಿ ಪಡೆದುಕೊಂಡಿತು. ಬಸ್ರೂರು ಶಾರದಾ ಕಾಲೇಜು ಉತ್ತಮ ನಿರೂಪಕ ಪ್ರಶಸ್ತಿಯನ್ನು ತೆಕ್ಕಟ್ಟೆ ಹಾಗೂ ಕಂಬದಕೋಣೆ ಕಾಲೇಜು ತಂಡಗಳು ಸಮಾಧಾನಕರ ಪ್ರಶಸ್ತಿಗಳನ್ನು ಪಡೆದು ಕೊಂಡವು.
ಸುರೇಶ ಕಲ್ಲಾಗರ ನಿರೂಪಿಸಿದರು, ಅಕ್ಷಯ ವಂದಿಸಿದರು.