ನವದೆಹಲಿ (ಪಿಟಿಐ): ಸರ್ಕಾರಿ ನೌಕರಿ ಬಡ್ತಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ಮಸೂದೆ ವಿರೋಧಿಸಿ ಸಮಾಜವಾದಿ ಪಕ್ಷದ ಸದಸ್ಯರು ಮಂಗಳವಾರ ರಾಜ್ಯಸಭಾ ಕಲಾಪಕ್ಕೆ ಪದೇಪದೇ ಅಡ್ಡಿಪಡಿಸಿದರು.
`ಬಡ್ತಿಯಲ್ಲಿ ಮೀಸಲಾತಿ ಬೇಡ' ಎಂಬ ಘೋಷಣೆಗಳನ್ನು ಸದಸ್ಯರು ಪದೇಪದೇ ಕೂಗಿದರು.
ಮೊದಲಿಗೆ ಸದನ ಆರಂಭವಾಗುತ್ತಿದ್ದಂತೆ, ಪಕ್ಷದ ಸದಸ್ಯರು ಈ ಮಸೂದೆಯನ್ನು ಅಂಗೀಕರಿಸಬಾರದು ಎಂದು ಕೋಲಾಹಲವೆಬ್ಬಿಸಿದರು. ಮಧ್ಯಾಹ್ನದ ಊಟದ ನಂತರ ಸಭೆ ಆರಂಭವಾದಾಗಲೂ ಪಕ್ಷದ ಸದಸ್ಯರು ಮಸೂದೆ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು.
ಆಮೇಲೆ ಶಿವಸೇನಾ ಸದಸ್ಯರೂ ಸಮಾಜವಾದಿ ಪಕ್ಷದ ಸದಸ್ಯರ ಜತೆ ದನಿಗೂಡಿಸಿದರು. ಸದನದ ಕಲಾಪಕ್ಕೆ ಅಡ್ಡಿಪಡಿಸಬಾರದೆಂಬ ಉಪ ಸಭಾಧ್ಯಕ್ಷ ಪಿ.ಜೆ.ಕುರಿಯನ್ ಅವರ ಮನವಿಯನ್ನು ಯಾರೂ ಕಿವಿ ಮೇಲೆ ಹಾಕಿಕೊಳ್ಳಲಿಲ್ಲ.
ಮತ್ತೊಮ್ಮೆ ಮಧ್ಯಾಹ್ನ 3ಕ್ಕೆ ಸದನ ಪುನಃ ಆರಂಭವಾದಾಗಲೂ ಸಮಾಜವಾದಿ ಪಕ್ಷದ ಸದಸ್ಯರು ರಾಜ್ಯಸಭಾಧ್ಯಕ್ಷರ ಪೀಠದ ಮುಂಭಾಗಕ್ಕೆ ನುಗ್ಗಿ ಆಕ್ರೋಶ ವ್ಯಕ್ತಪಡಿಸಿದರು.