ಬೆಂಗಳೂರು: ಭೂವಿವಾದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಹೈಕೋರ್ಟ್ನಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಪ್ರಕರಣದಲ್ಲಿ ಲೋಕಾಯುಕ್ತದ ಪರವಾಗಿ ವಾದಿಸಲು ಹಿರಿಯ ವಕೀಲ ಬಿ.ವಿ.ಆಚಾರ್ಯ ಅವರನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಎಸ್ಪಿಪಿ) ಆಗಿ ಸರ್ಕಾರ ನೇಮಕ ಮಾಡಿರುವುದನ್ನು ಪ್ರಶ್ನಿಸಿ ಬಿಬಿಎಂಪಿ ಸದಸ್ಯ ಕಟ್ಟಾ ಜಗದೀಶ್ ಕೋರ್ಟ್ಗೆ ಶುಕ್ರವಾರ ಅರ್ಜಿ ಸಲ್ಲಿಸಿದ್ದಾರೆ.
ಲೋಕಾಯುಕ್ತ ಪರವಾಗಿ ವಾದ ಮಂಡಿಸಲು ವಕೀಲ ರಾಜೇಂದ್ರ ರೆಡ್ಡಿ ಅವರನ್ನು ಅಧಿಕೃತವಾಗಿ ಎಸ್ಪಿಪಿಯನ್ನಾಗಿ ಸರ್ಕಾರ ಈಗಾಗಲೇ ನೇಮಿಸಿರುವಾಗ ಆಚಾರ್ಯ ನೇಮಕಾತಿ ಸರಿಯಲ್ಲ. ಈ ನೇಮಕಾತಿಯನ್ನು ಅನೂರ್ಜಿತಗೊಳಿಸಬೇಕು ಎಂಬುದು ಜಗದೀಶ್ ಅವರ ವಾದ.
ಆಚಾರ್ಯ ಅವರು ಈ ಹಿಂದೆ ಲೋಕಾಯುಕ್ತದ ಪರವಾಗಿ ವಾದ ಮಂಡಿಸುತ್ತಿದ್ದಾಗ ಇದೇ ರೀತಿಯ ಪ್ರಶ್ನೆಯನ್ನು ಜಗದೀಶ್ ಎತ್ತಿದ್ದರು. ಎಸ್ಪಿಪಿಯನ್ನಾಗಿ ಸರ್ಕಾರ ಅಧಿಕೃತವಾಗಿ ನೇಮಿಸಿಲ್ಲ ಎನ್ನುವುದು ಆಗ ಅವರ ವಾದವಾಗಿತ್ತು.ಈ ಹಿನ್ನೆಲೆಯಲ್ಲಿ ಆಚಾರ್ಯ ಅವರು ವಾದ ಮಂಡಿಸದಂತೆ ಹೈಕೋರ್ಟ್ ಸೂಚಿಸಿತ್ತು. ಇದರ ನಂತರ ಸರ್ಕಾರ ಅವರನ್ನು ಎಸ್ಪಿಪಿಯನ್ನಾಗಿ ನೇಮಿಸಿದ್ದು, ಇದನ್ನೂ ಜಗದೀಶ್ ಪ್ರಶ್ನಿಸಿದ್ದಾರೆ.